×
Ad

ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ: ಡಿ.ಕೆ.ಶಿವಕುಮಾರ್

Update: 2025-07-30 21:50 IST

ಬೆಂಗಳೂರು : ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಚುನಾವಣಾ ಅಕ್ರಮ (ಮತಗಳ್ಳತನ) ಆಗಿರುವ ಬಗ್ಗೆ ಕೆಪಿಸಿಸಿ ಸಂಶೋಧನಾ ತಂಡ ಪತ್ತೆ ಹೆಚ್ಚಿದೆ. ಈ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿಯೂ ಪ್ರಸ್ತಾಪಿಸಿದ್ದು, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಸಭಾಂಗಣದ ಇಂದಿರಾ ಗಾಂಧಿ ಭವನದಲ್ಲಿ ಆ.5ರಂದು ಪ್ರತಿಭಟನೆ ನಡೆಸುವ ಸಂಬಂಧ ನನ್ನ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ‘ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು’ ಎಂದು ಕರೆ ನೀಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು. ಬಿಜೆಪಿಯವರು ‘ಚಿಲುಮೆ’ ಹಾಗೂ ಇತರೆ ಸಂಸ್ಥೆಗಳ ದುರ್ಬಳಕೆ ಮೂಲಕ ಅಕ್ರಮ ಮಾಡಲು ಮುಂದಾಗಿದ್ದರು. ಅದನ್ನು ನಾವು ಸಂಪೂರ್ಣವಾಗಿ ತಡೆಯಲು ಆಗಲಿಲ್ಲ. ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಅಕ್ರಮ ಎಸಗಿದ್ದರು. ಇದರಿಂದ ಬೆಂಗಳೂರಿನಲ್ಲಿ ಹೆಚ್ಚು ಕಮ್ಮಿ ಆಗಿತ್ತು ಎಂದು ಅವರು ಉಲ್ಲೇಖಿಸಿದರು.

ವಿಧಾನಸಭೆ ಚುನಾವಣೆ ನಂತರ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್‍ರ ಪುತ್ರ ನನ್ನನ್ನು ಭೇಟಿ ಮಾಡಿ ನನಗೆ ದೊಡ್ಡ ಮಾಹಿತಿ ನೀಡಿದರು.  ನಾವು ಅದನ್ನು ಪರಿಶೀಲನೆ ಮಾಡಿದೆವು. ಅಷ್ಟು ಹೊತ್ತಿಗೆ ತಡವಾದ ಪರಿಣಾಮ ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ನಂತರ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ನಡೆದಿದ್ದು, ನಮ್ಮ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಪರಿಶೀಲನೆ ಮುಂದುವರಿಸಿದ್ದಾರೆ. ಪಕ್ಷದ ವತಿಯಿಂದ ಇದನ್ನು ಅಧ್ಯಯನ ಮಾಡಿ ದಿಲ್ಲಿಗೆ ತಲುಪಿಸಿದ್ದೇವೆ. ಇಲ್ಲಿ ಆಗಿರುವ ಅಕ್ರಮದ ಬಗ್ಗೆ ನಾನು ಬಿಡಿಸಿ ಹೇಳುವುದಿಲ್ಲ. ಈ ವಿಚಾರ ಯಾರ ಬಾಯಿಂದ ಬರಬೇಕೋ ಅವರಿಂದಲೇ ಬರಬೇಕು ಎಂದು ಅವರು ತಿಳಿಸಿದರು.

ಇಡೀ ದೇಶದಲ್ಲಿ ಚುನಾವಣಾ ಅಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಏನಾಗಿದೆ ಎಂದು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾನು ಈ ವಿಚಾರವಾಗಿ ಬಿಎಲ್‍ಎಗಳನ್ನು ಮಾಡಲು ಕೆಲವು ಎಂಎಲ್‍ಸಿಗಳಿಗೆ ಜವಾಬ್ದಾರಿ ವಹಿಸಿದೆ. ಎಂಎಲ್‍ಸಿ ಆಗುವಾಗ ಇರುವ ಆಸಕ್ತಿ ನಂತರ ಇರುವುದಿಲ್ಲ. ಕೆಲವು ಎಂಎಎಲ್‍ಎ ಅಭ್ಯರ್ಥಿಗಳಿಗೆ ಇದರ ಜವಾಬ್ದಾರಿ ವಹಿಸಿದೆ.

ಕೆಲವರಿಗೆ ಚುನಾವಣೆ ನಂತರ ಆಸಕ್ತಿ ತೋರಲಿಲ್ಲ. ಕೆಲವರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ನಮ್ಮ ನಾಯಕರು ಖುದ್ದಾಗಿ ಬರುತ್ತಿದ್ದಾರೆ. ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬರುತ್ತಿದ್ದಾರೆ. ಆ.5ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿ ಮಾಡಲಿರುವ ರ್ಯಾಲಿಯ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಿಚಾರವಾಗಿ ನಾನು ಒಂದಷ್ಟು ಸಲಹೆ ಕಳುಹಿಸಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ನಾಯಕರು ಬಂದಾಗ ಬೆಂಗಳೂರು ನಗರ ವಿಭಾಗ, ಬೆಂಗಳೂರು ದಕ್ಷಿಣ ಹಾಗೂ ಗ್ರಾಮಾಂತರ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಹಣ ಕೊಟ್ಟು ಯಾರನ್ನೂ ಕರೆದುಕೊಂಡು ಬರಬೇಡಿ. ಕಾರ್ಯಕರ್ತರು, ಮುಖಂಡರು, ಸಾರ್ವಜನಿಕರು ಬಂದರೆ ಸಾಕು ಎಂದು ಅವರು ಹೇಳಿದರು.

ಶೀಘ್ರದಲ್ಲೇ ನಿಗಮ ಮಂಡಳಿ ಪಟ್ಟಿ: ಸರಕಾರ ಬಂದ ನಂತರ ನಾವು ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿ ನೀಡಿದ್ದೇವೆ. ಗ್ಯಾರಂಟಿ ಸಮಿತಿ, ನಾಮನಿರ್ದೇಶನ ಮಾಡಿದ್ದೇವೆ. ಇನ್ನೂ 3-4 ದಿನಗಳಲ್ಲಿ ಮತ್ತಷ್ಟು ಜನರಿಗೆ ಜವಾಬ್ದಾರಿ ನೀಡಿ ಪಟ್ಟಿ ಹೊರಬರಲಿದೆ. ಈಗಾಗಲೇ ಅದು ಸಿದ್ಧವಾಗುತ್ತಿದೆ. ಪ್ರತಿ ಕ್ಷೇತ್ರಕ್ಕೆ ಇಬ್ಬರಂತೆ ಸುಮಾರು 700 ಜನರಿಗೆ ಸ್ಥಾನಮಾನ ನೀಡಲು ಮುಂದಾಗಿದ್ದೇವೆ ಎಂದರು.

ಉಳಿದ 30 ಜನರಿಗೆ ಕೆಲವು ನಿಗಮ ಮಂಡಳಿ, ಮತ್ತೆ ಕೆಲವರಿಗೆ ಉಪಾಧ್ಯಕ್ಷ ಹುದ್ದೆ ನೀಡಲಾಗುತ್ತಿದೆ. ಪಟ್ಟಿ ಹೈಕಮಾಂಡ್ ಬಳಿಗೆ ಹೋಗಿದ್ದು, ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಯಾರೆಲ್ಲಾ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪರಿಶೀಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಸುಮಾರು 4-5 ಸಾವಿರ ಜನ ಈ ಸ್ಥಾನಮಾನಕ್ಕೆ ಅರ್ಹತೆ ಹೊಂದಿರುವವರು ಇದ್ದಾರೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿಗಳಿಂದ ಸಭೆ: ಐಸಿಸಿ ಪ್ರಧಾನ ಕಾರ್ಯದರ್ಶಿಗಳು ನಾಳೆ (ಜು.31) ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಎಂಎಲ್‍ಎ ಹಾಗೂ ಎಂಪಿ ಅಭ್ಯರ್ಥಿಗಳು, ಎಂಎಲ್‍ಸಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಿದ್ದಾರೆ.

ನಮ್ಮ ಈ ಹೋರಾಟ ಬಿಹಾರದ ಚುನಾವಣೆಗಾಗಿ ಎಂದು ಕೆಲವು ಮಾಧ್ಯಮಗಳು ಹೇಳುತ್ತಿವೆ. ಆದರೆ ನಾವು ಬಿಹಾರ ಚುನಾವಣೆಗೆ ಮಾಡುತ್ತಿಲ್ಲ. ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಹೇಗೆ ಅಕ್ರಮವಾಗಿದೆ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯದ ಬಗ್ಗೆ ಜನರಿಗೆ ತಿಳಿಸಬೇಕು. ನಮ್ಮ ನಾಯಕರು ಬಂದಾಗ ದೊಡ್ಡಸಂಖ್ಯೆಯಲ್ಲಿ ಸಂಘಟನೆ ಮಾಡಬೇಕು. ನಾನು ಈ ವಿಚಾರವಾಗಿ ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News