ಹೈಕೋರ್ಟ್ ತೀರ್ಪು ಅನ್ವಯ ನೈಸ್ ರಸ್ತೆ ಟೋಲ್ ಸಂಗ್ರಹ ನಿಲ್ಲಿಸಿ : ಎಚ್.ಡಿ.ಕುಮಾರಸ್ವಾಮಿ

Update: 2026-08-08 20:46 IST

ಬೆಂಗಳೂರು : ನೈಸ್ ಸಂಸ್ಥೆ ಭೂ ಅಕ್ರಮದ ಸಂಬಂಧ ಹೈಕೋರ್ಟ್ ತೀರ್ಪು ನೀಡಿದ್ದು, ಈ ಕೂಡಲೇ ನೈಸ್ ರಸ್ತೆಯ ಟೋಲ್ ಸಂಗ್ರಹ ರದ್ದು ಮಾಡಬೇಕು ಎಂದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಶನಿವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್‍ನ ದ್ವಿಸದಸ್ಯ ನ್ಯಾಯ ಪೀಠ ಜು.29 ರಂದು ಬಿಎಂಐಸಿ ಯೋಜನೆ ಕುರಿತಂತೆ ನೀಡಿರುವ ತೀರ್ಪಿನ ಬಗ್ಗೆ ರಾಜ್ಯ ಸರಕಾರ ಏಕೆ ಮೌನ ವಹಿಸಿದೆ ಎಂದು ಅವರು ಪ್ರಶ್ನಿಸಿದರು.

ಸರಕಾರದ ಪೂರ್ವಾನುಮತಿ ಪಡೆಯದೆ ನೈಸ್ ಸಂಸ್ಥೆ ಟೋಲ್ ಪರಿಷ್ಕರಣೆ ಮಾಡಿದೆ. ಹೀಗಾಗಿ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ರಸ್ತೆ ಬಳಕೆದಾರರು, ಬೆಂಗಳೂರಿನ ನಾಗರಿಕರು, ನಾಡಿನ ಜನರು, ರೈತರು, ಯುವಕರು ಹೋರಾಟ ಮಾಡಬೇಕು. ಲಂಚ ಕೇಳಿದರೆ ಫೋನ್ ಮಾಡಿ ಎಂದು ಹೇಳುವ ಮುಖ್ಯಮಂತ್ರಿಗಳಿಗೆ ನ್ಯಾಯಾಲಯವೇ, ಇದೊಂದು ದೇಶದ ದೊಡ್ಡ ಹಗರಣ ಎಂದು ಹೇಳಿದೆ. ಸದನ ಸಮಿತಿಯು ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ವರದಿ ನೀಡಿದೆ. ಹೀಗಿದ್ದರೂ ಮೌನವೇಕೆ? ಎಂದು ಅವರು ಕೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಬಿಎಂಐಸಿ ಯೋಜನೆ ಕುರಿತ ಮೂಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅನಂತರದ ಸರಕಾರದಲ್ಲಿ ಬದಲಾವಣೆಯಾಗಿದೆ. ಮೂಲ ಒಪ್ಪಂದ ಉಲ್ಲಂಘಿಸಿ ರೈತರಿಂದ 20 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರಿಗೆ ಭೂ ಪರಿಹಾರವನ್ನು ನೀಡಿರುವ ಕೆಐಡಿಬಿ ಪರಿಹಾರ ನೀಡಲು ಕಾಲಮಿತಿ ಇಲ್ಲ ಎಂದು ಹೇಳುತ್ತದೆ. ಹೈಕೋರ್ಟ್ 150 ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ ಎಂದ ಅವರು, ಮೂಲ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಕಾನೂನು ಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೂ ಸರಕಾರ ಮೌನಕ್ಕೆ ಶರಣಾಗಿದೆ ಎಂದು ಅವರು ಟೀಕಿಸಿದರು.

2017ರಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸದನ ಸಮಿತಿ ಕೂಡಾ ವರದಿ ಕೊಟ್ಟಿದ್ದು, ಯೋಜನೆಯನ್ನು ವಾಪಸ್ ಪಡೆದು ಸಿಬಿಐಗೆ ವಹಿಸಬೇಕು ಎಂದು ಹೇಳಿದೆ. ಅದರ ಬಗ್ಗೆಯೂ ಸರಕಾರ ತೀರ್ಮಾನ ಕೈಗೊಂಡಿಲ್ಲ. 20 ವರ್ಷವಾದರೂ ರೈತರಿಗೆ ಭೂಮಿ ನೀಡಿಲ್ಲ. ಜನರನ್ನು ರಕ್ಷಿಸಬೇಕಾದ ಸರಕಾರವೇ ಏಕೆ ಮೌನ ವಹಿಸಿದೆ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿದೆ. ಕೆರೆಕಟ್ಟೆಯನ್ನು ಕೂಡಾ ನೈಸ್ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು, ಸಂಸದ ಮಲ್ಲೇಶ್ ಬಾಬು ಸೇರಿದಂತೆ ಪ್ರಮುಖರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News