ಕರ್ನಾಟಕದಲ್ಲಿ 3 ತಿಂಗಳಲ್ಲಿ 1 ಸಾವಿರ ಅಕ್ರಮ ವಲಸಿಗರು ಪತ್ತೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

Update: 2026-08-08 20:32 IST

ಬೆಂಗಳೂರು : ಹಿಂದಿನ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ 1 ಸಾವಿರ ಮಂದಿ ಅಕ್ರಮ ವಲಸಿಗರು, ಬಾಂಗ್ಲಾದೇಶಿಗರು ಸಿಕ್ಕಿದ್ದಾರೆ. ಇವರೆಲ್ಲರೂ ಉತ್ತರ ಭಾರತದಿಂದ ವಲಸೆ ಬಂದಿದ್ದಾರೆ. ಈ ಸಂಬಂಧ ವಿಶೇಷ ತಂಡ ರಚಿಸಿ ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅಕ್ರಮ ವಲಸಿಗರ ಹುಡುಕಾಟ ವಿಚಾರವಾಗಿ ಮಾತನಾಡಿದ ಅವರು, 1ಸಾವಿರ ಜನ ಅಕ್ರಮ ವಲಸಿಗರು, ಬಾಂಗ್ಲಾದೇಶಿಗರು ಸಿಕ್ಕಿದ್ದಾರೆ. ಈ ಸಂಬಂಧ ಎಫ್‍ಆರ್‌ಒ, ಬಿಎಸ್‍ಎಫ್ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾವು ಕಟ್ಟುನಿಟ್ಟಾಗಿ ಗಂಭೀರವಾಗಿ ಶೋಧನೆ ನಡೆಸುತ್ತಿದ್ದೇವೆ ಎಂದರು.

ಬಾಂಗ್ಲಾದೇಶ, ಆಫ್ರಿಕಾ ಯಾವ ದೇಶದವರೇ ಇರಬಹುದು. ಹಿಂದಿನ 3 ತಿಂಗಳಲ್ಲಿ ಸುಮಾರು ಒಂದು ಸಾವಿರ ಜನ ವಲಸಿಗರು ಸಿಕ್ಕಿದ್ದಾರೆ. ಇವರೆಲ್ಲರೂ ಉತ್ತರ ಭಾರತದಿಂದಲೇ ಬರುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜೀ ಇಲ್ಲ. ಈಗಾಗಲೇ ಎಫ್‍ಆರ್‌ ಒ, ಬಿಎಸ್‍ಎಫ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ವಿಚಾರದಲ್ಲಿ ನಿರಂತರವಾಗಿ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಪ್ರಮುಖವಾಗಿ ಕೇಂದ್ರ ಸರಕಾರ ನೆರವಿಗೆ ಬರಬೇಕಾಗುತ್ತದೆ. ನಮ್ಮ ರಾಜ್ಯ ಯಾವುದೇ ಅಂತಾರಾಷ್ಟ್ರೀಯ ಗಡಿ ಹೊಂದಿಲ್ಲ. ನಮಗೆ ಸಂಪರ್ಕ ಇಲ್ಲ. ಬಾಂಗ್ಲಾದೇಶ, ನೇಪಾಳ ಸೇರಿದಂತೆ ಬೇರೆ ಯಾವ ರಾಷ್ಟ್ರದ ಗಡಿ ಕೂಡ ನಾವು ಹಂಚಿಕೊಳ್ಳುವುದಿಲ್ಲ. ಆದರೂ ಅವರು ನುಗ್ಗುತ್ತಿದ್ದಾರೆ ಅಂದರೆ ಎಲ್ಲಿಂದ ಬರುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

 

 ‘ಗಡಿ ಕಾಯುವ ವಿಚಾರ ಕೇಂದ್ರ ಸರಕಾರದ್ದು. ಅವರು ಅವರ ಜವಾಬ್ದಾರಿ ಸರಿಯಾಗಿ ಮಾಡುತ್ತಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಇಷ್ಟು ದೂರ ಬರುತ್ತಿದ್ದಾರೆ ಅಂದರೆ ನಮ್ಮ ಅಂತಾರಾಷ್ಟ್ರೀಯ ಗಡಿ ಮಾತ್ರ ಅಲ್ಲ, ರಾಜ್ಯ ಗಡಿಗಳು ವಿಫಲವಾಗಿದೆ. ಇತ್ತೀಚೆಗೆ ಸ್ಲಂಗಳಿಗೆ ಹೋಗಿ ಯಾವ ದೇಶ, ಯಾವ ರಾಜ್ಯ ಅಂತ ಕೇಳಿ ವಿಡಿಯೋ ಮಾಡಿ ಸರಕಾರವನ್ನು ಬಾಯಿಗೆ ಬಂದಂತೆ ಬೈಯ್ಯೋದು ಟ್ರೆಂಡ್ ಆಗಿದೆ. ನಿಮ್ಮ ಬಳಿ ಮಾಹಿತಿ ಇದ್ದರೆ ಬಂದು ನಮ್ಮ ಸಿಬ್ಬಂದಿಗೆ ಕೊಡಿ. ನೀವು ಸೋಷಿಯಲ್ ಮೀಡಿಯಾ ಹೀರೋ ಆಗಲು ಹೋಗಿ ಅಂತಾರಾಷ್ಟ್ರೀಯ ಮಾಫಿಯಾವನ್ನು ಬಲಪಡಿಸುತ್ತಿದ್ದೀರಾ?’

-ಪ್ರಿಯಾಂಕ್ ಖರ್ಗೆ, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News