×
Ad

ದಾವೋಸ್ ಸಮಾವೇಶ: ವಿಜಯಪುರ, ಬಳ್ಳಾರಿಯಲ್ಲಿ ಸಂಜೀವ್ ಗೊಯೆಂಕಾ ಸಮೂಹದಿಂದ 10,500 ಕೋಟಿ ರೂ.ಹೂಡಿಕೆ

ಪವನ ವಿದ್ಯುತ್ ಟವರ್ ಅಭಿವೃದ್ಧಿಗೆ ಐನಾಕ್ಸ್ ಜಿಎಫ್‍ಎಲ್ ಕಂಪೆನಿ ಆಸಕ್ತಿ: ಎಂ.ಬಿ.ಪಾಟೀಲ್

Update: 2026-01-22 23:05 IST

ಬೆಂಗಳೂರು: ಮರುಬಳಕೆ ಇಂಧನ ವಲಯದಲ್ಲಿ ಹೆಸರು ಮಾಡಿರುವ ಆರ್.ಪಿ-ಸಂಜೀವ್ ಗೊಯೆಂಕಾ ಉದ್ಯಮ ಸಮೂಹವು ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,500ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿವೆ. ಇದಕ್ಕೆ ಸರಕಾರದ ಕಡೆಯಿಂದ ಬೇಕಾದ ನೆರವನ್ನು ಒದಗಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಈ ಮಾಹಿತಿ ನೀಡಿದ್ದಾರೆ. ಕೆಲ ಸಭೆಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಭಾಗವಹಿಸಿದ್ದರು.

ಇದೇ ರೀತಿಯಲ್ಲಿ ಈಗಾಗಲೇ ಕುಷ್ಟಗಿಯಲ್ಲಿ ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿರುವ ಟರ್ಬೈನ್ ಬ್ಲೇಡ್ ಉತ್ಪಾದನೆ ಆರಂಭಿಸಿರುವ ಐನಾಕ್ಸ್ ಜಿಎಫ್‍ಎಲ್ ಕಂಪೆನಿಯು ಮುಂಬರುವ ದಿನಗಳಲ್ಲಿ ಇದಕ್ಕೆ ಹತ್ತಿರದ ಪ್ರದೇಶದಲ್ಲೇ ಪವನ ವಿದ್ಯುತ್ತಿಗೆ ಬೇಕಾದ ದೈತ್ಯ ಗೋಪುರಗಳ(ಟವರ್)ಅಭಿವೃದ್ಧಿ ಘಟಕವನ್ನೂ ಆರಂಭಿಸಲು ಮುಂದಾಗಿದೆ. ಈ ಕಂಪನಿಯು ರಾಜ್ಯದಲ್ಲಿ ಈಗಾಗಲೇ 10ಸಾವಿರ ಕೋಟಿ ರೂ.ಹೂಡಿಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿರುವ ರಾಮ್ಕಿ ಗ್ರೂಪ್, ರಾಜ್ಯದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು(ಸಿಇಪಿಟಿ) ಸ್ಥಾಪಿಸಲು ಆಸಕ್ತಿ ತೋರಿಸಿದೆ. ಜತೆಗೆ, ಈ ಕಂಪೆನಿಯೊಂದಿಗೆ ರಾಜ್ಯದಲ್ಲಿ `ಫಾರ್ಮಾ ಪಾರ್ಕ್’ ಸ್ಥಾಪನೆ ಸಂಬಂಧ ಚರ್ಚಿಸಲಾಗಿದೆ. ಟೆಕ್ ಮಹೀಂದ್ರ ಕಂಪೆನಿ ರಾಜ್ಯದ 2ನೇ ಹಂತದ ನಗರಗಳಲ್ಲಿ ಕೈಗಾರಿಕಾ ಹೂಡಿಕೆ ಮಾಡಲು ಬಯಸಿದೆ ಎಂದು ಅವರು ವಿವರಿಸಿದರು.

ಸಿಂಗಪುರ್ ಮೂಲದ ಕಂಪೆನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಬೇಕೆಂಬ ಆಲೋಚನೆ ನಮಗೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಗುರಿ ಸಾಧಿಸಲು `ಸಿಂಗಪುರ್ ಪಾರ್ಕ್’ ಸ್ಥಾಪಿಸುವ ಬಗ್ಗೆ ಆ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ `ಸಿಂಗಪುರ್ ಆರ್ಥಿಕ ಅಭಿವೃದ್ಧಿ ಮಂಡಳಿ’ಯ ಪ್ರತಿನಿಧಿಗಳ ಜತೆ ಪ್ರಸ್ತಾಪಿಸಲಾಗಿದೆ. ಸಿಂಗಪುರ್ ಜತೆ ನಮಗೆ ಸೆಮಿಕಂಡಕ್ಟರ್ಸ್, ಜೈವಿಕ ತಂತ್ರಜ್ಞಾನ ಮತ್ತು ವೈಮಾಂತರಿಕ್ಷ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಪಾಟೀಲ್ ನುಡಿದರು.

ಪರ್ಸನಲ್ ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‍ಫೋನ್ ತಯಾರಿಕೆಗೆ ಹೆಸರಾಗಿರುವ ಲೆನೋವೋ ಕಂಪೆನಿಯು ಸ್ಥಳೀಯ ಪೂರೈಕೆದಾರರು ಮತ್ತು ಉದ್ಯಮಿಗಳೊಂದಿಗೆ ಸಹಭಾಗಿತ್ವ ಹೊಂದುವ ಕುರಿತು ವಿಚಾರ ವಿನಿಮಯ ನಡೆಸಿದೆ. ರಕ್ಷಣಾ ಕ್ಷೇತ್ರದಲ್ಲಿರುವ ಎಕ್ಸಾನ್ ಕೇಬಲ್ಸ್, ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಇದನ್ನು ಮನಗಂಡು, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಅವರಿಗೆ ಕೋರಿದ್ದೇವೆ ಎಂದು ಅವರು ತಿಳಿಸಿದರು.

ಜಾಗತಿಕ ವ್ಯಾಪಾರ ಹಾಗೂ ಕೈಗಾರಿಕಾ ಪರಿವರ್ತನೆಯ ಮುಂದಿನ ಹಂತದಲ್ಲಿ ಕರ್ನಾಟಕವು ಹಿಂದೆ ಬೀಳದಂತೆ, ಸ್ಪರ್ಧಾತ್ಮಕವಾಗಿ ತನ್ನ ಸ್ಥಾನ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುಂಕ, ಕೃತಕ ಬುದ್ಧಿಮತ್ತೆ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಭವಿಷ್ಯದ ಕಾರ್ಯತಂತ್ರಗಳ ಕುರಿತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‍ಯ(ಬಿಸಿಜಿ) ವ್ಯವಸ್ಥಾಪಕ ನಿರ್ದೇಶಕ ನಿಕೊಲಾಸ್ ಲ್ಯಾಂಗ್ ಅವರ ಜೊತೆ ರಾಜ್ಯದ ನಿಯೋಗವು ವಿಸ್ತೃತವಾಗಿ ಚರ್ಚಿಸಿದೆ.

ಸರಕಾರದ ಬೆಂಬಲಕ್ಕೆ ಮೆಚ್ಚುಗೆ:

‘ಕಾಲಮಿತಿ ಒಳಗೆ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಬೆಂಬಲವನ್ನು ವಿವಿಧ ಉದ್ಯಮ ಸಮೂಹಗಳು ಮುಕ್ತಕಂಠದಿಂದ ಪ್ರಶಂಸಿಸಿವೆ’ ಎಂದು ಸಚಿವರು ತಿಳಿಸಿದರು.

ಬೆಂಗಳೂರು ಆಚೆಗಿನ ನಗರಗಳು ಸ್ವಯಂ ಸುಸ್ಥಿರ ನಗರಗಳಾಗಿ ಬೆಳೆಯುವುದಕ್ಕೆ ರಾಜ್ಯ ಸರಕಾರದ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ, ರಾಜ್ಯದಲ್ಲಿನ 2ನೆ ಸ್ಥರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ ಒಲವು ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಇನ್ನೂ 20ಹೆಚ್ಚುವರಿ ತರಬೇತಿ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಸ್ನೈಡರ್ ಎಲೆಕ್ಟ್ರಿಕ್ ತಿಳಿಸಿದೆ. ಕ್ರಮೇಣ 100ಕೌಶಲ ಅಭಿವೃದ್ಧಿ ಕೇಂದ್ರಗಳ ವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಪಾಟೀಲ್ ತಿಳಿಸಿದರು.

ಸ್ವಿಸ್ ಚೇಂಬರ್ಸ್ ಇಂಡಿಯಾ ಜತೆ ಒಡಂಬಡಿಕೆ:

‘ಸ್ವಿಟ್ಜಲೆರ್ಂಡಿನ ಕಂಪೆನಿಗಳೊಂದಿಗೆ ರಾಜ್ಯದ ಕೈಗಾರಿಕಾ ಸಂಬಂಧವನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಿಸ್ ಚೇಂಬರ್ಸ್ ಇಂಡಿಯಾದೊಂದಿಗೆ ದಾವೋಸ್ ಸಮಾವೇಶದಲ್ಲಿ ರಾಜ್ಯ ಸರಕಾರವು ಒಡಂಬಡಿಕೆಗೆ ಸಹಿ ಹಾಕಿದೆ. ಈ ವೇಳೆ ಸ್ವಿಸ್ ಚೇಂಬರ್ಸ್ ಮುಖ್ಯಸ್ಥ ಸತೀಶ್ ರಾವ್ ಮತ್ತು 6 ಸ್ವಿಸ್ ಕಂಪೆನಿಗಳ ಸಿಇಒಗಳು ಉಪಸ್ಥಿತರಿದ್ದರು’ ಎಂದು ಎಂ.ಬಿ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News