ಮಹದೇವಪುರದ ಮತದಾರರ ಪಟ್ಟಿ ಲಭ್ಯವಾಗದಂತೆ ಕುತಂತ್ರ: ಪ್ರಿಯಾಂಕ್ ಖರ್ಗೆ
"ಚುನಾವಣಾ ಆಯೋಗವು ಮತಗಳ್ಳತನದ ಸಾಕ್ಷಿ ನಾಶಕ್ಕೆ ಮುಂದಾಗಿದೆಯೇ?"
ಬೆಂಗಳೂರು: ಚುನಾವಣಾ ಆಯೋಗ ಎಂಬ ಕುಂಬಳಕಾಯಿ ಕಳ್ಳ ಹೆಗಲನ್ನಷ್ಟೇ ಅಲ್ಲ ಮೈಯೆಲ್ಲಾ ತಡವಿಕೊಳ್ಳುತ್ತಿದೆ. ನಿನ್ನೆ ರಾಹುಲ್ ಗಾಂಧಿ ಮತಗಳ್ಳತನವನ್ನು ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದೆ ತಡ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್ಸೈಟ್ಗಳು ಕೆಲ ಹೊತ್ತು ಬೀಗ ಹಾಕಿಕೊಂಡು ಕುಳಿತಿದ್ದವು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ 2024ರ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಡೌನ್ಲೋಡ್ ಆಗದಂತೆ ತಾಂತ್ರಿಕ ಕುತಂತ್ರ ಮಾಡಲಾಗಿದೆ ಎಂದು ದೂರಿದ್ದಾರೆ.
ಚುನಾವಣಾ ಆಯೋಗವು ಮತಗಳ್ಳತನದ ಸಾಕ್ಷಿ ನಾಶಕ್ಕೆ ಮುಂದಾಗಿದೆಯೇ? ಜನತೆಗೆ ತನ್ನ ಕಳ್ಳತನ ತಿಳಿಯದಂತೆ ಮಾಡಲು ಸಾಹಸ ಮಾಡುತ್ತಿದೆಯೇ? ಈ ಕುತಂತ್ರಗಾರಿಕೆಗೆ ಯಾರ ನಿರ್ದೇಶನವಿದೆ? ಚುನಾವಣಾ ಆಯೋಗವು ಪಾರದರ್ಶಕತೆಯಿಂದ ಪಲಾಯನ ಮಾಡುತ್ತಿರುವುದೇಕೆ? ಲೋಪಗಳೆ ಆಗಿಲ್ಲ ಎಂದಾದರೆ ಈ ಕಳ್ಳಾಟ ಏಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.