‘ಅಬಕಾರಿ ಇಲಾಖೆಯಲ್ಲಿ ಲಂಚ’ ಆರೋಪ ಪ್ರಕರಣ : ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯನ್ನಿಟ್ಟ ಆರೋಪ ಪ್ರಕರಣ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ಲಂಚಕ್ಕೆ ಬೇಡಿಕೆ ಇಟ್ಟಿರುವ ಅಧಿಕಾರಿಗಳ ಆಡಿಯೊ ಸಾಕ್ಷ್ಯ ಇದೆ. ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಕೂಡಲೇ ಅಬಕಾರಿ ಸಚಿವರು ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಸದಸ್ಯ ವಿ.ಸುನೀಲ್ಕುಮಾರ್ ಮಧ್ಯಪ್ರವೇಶಿಸಿ, ‘ಗಂಭೀರವಾದ ಆರೋಪಗಳನ್ನು ವಿರೋಧ ಪಕ್ಷದ ನಾಯಕರು ಎಳೆಎಳೆಯಾಗಿ ಬಿಡಿಸಿಡುತ್ತಿದ್ದಾರೆ. ಆರೋಪ ಹೊತ್ತಿರುವ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅವರ ರಾಜೀನಾಮೆಯನ್ನು ಪಡೆಯಬೇಕು’ ಎಂದು ವಾಗ್ದಾಳಿ ನಡೆಸಿದರು.
ಆಗ ಕಾಂಗ್ರೆಸ್ ಪಕ್ಷದ ಸದಸ್ಯ ಎ.ಎಸ್.ಪೊನ್ನಣ್ಣ ಮಾತನಾಡಿ, ‘ವಿರೋಧ ಪಕ್ಷದವರು ಮಾಡುತ್ತಿರುವ ಆರೋಪ ಏನೂ ಅರ್ಥವಾಗುತ್ತಿಲ್ಲ ಎಂದರು. ಇದಕ್ಕೆ ಬಿಜೆಪಿಯ ಸುರೇಶ್ಗೌಡ ಮಾತನಾಡಿ, ‘ಮೊದಲ ಬಾರಿ ಶಾಸಕರಾದವರು ಏಳು ಬಾರಿ ಶಾಸಕರಾದವರಿಗೆ ಪಾಠ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು.
ಪೊನ್ನಣ್ಣ ಅವರ ಬೆಂಬಲಕ್ಕೆ ನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಪೊನ್ನಣ್ಣ ಅವರು ಹೊಸಬರಾಗಿ ಶಾಸಕರಾಗಿರಬಹುದು. ಅವರಿಗೆ ಒಳ್ಳೆಯ ಅನುಭವವಿದೆ ಎಂದರು. ಬಿಜೆಪಿ ಮತ್ತೊಬ್ಬ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಿಮ್ಮ ಸರಕಾರದ ಕಾನೂನು ಸಲಹೆಗಾರರು ಇವರು ಎಂದು ಲೇವಡಿ ಮಾಡಿದರು.
ಆಗ ಅಶೋಕ್ ಮಾತನಾಡಿ, ಪೊನ್ನಣ್ಣ ಅವರೇ ನಿಮಗೂ ಆಡಿಯೊ ಕೊಡುತ್ತೇವೆ, ಕೇಳಿ ಎಂದು ಮಾತು ಮುಂದುವರೆಸಿ, ಮಂಡ್ಯ ಅಬಕಾರಿ ಇಲಾಖೆಯ ಡಿಸಿ ಪರವಾನಗಿ ನೀಡುವ ವಿಚಾರದಲ್ಲಿ ಜಾತಿ ತಂದಿದ್ದಾರೆ. ಜಾತಿ ಆಧಾರದ ಮೇಲೆ ಮದ್ಯದಂಗಡಿಯ ಪರವಾನಗಿ ನೀಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.
ಆಗ ಆಡಳಿತ ಪಕ್ಷದ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ವೈನ್ ಸ್ಪೋರ್ಗೆ ಹೋದರೆ ಇಂತಹ 50 ಆಡಿಯೋ, ವಿಡಿಯೊಗಳನ್ನು ತರಬಹುದು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ಅಬಕಾರಿ ಜಿಲ್ಲಾಧಿಕಾರಿ ಎಣ್ಣೆ ಅಂಗಡಿಯಲ್ಲಿ ಕುಡಿದು ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿಯ ವೇದವ್ಯಾಸ ಕಾಮತ್ ಮಾತನಾಡಿ, ‘ಇದು ಕೊಬ್ಬರಿಯ ವಿಚಾರವಲ್ಲ. ಎಣ್ಣೆ ಅಂಗಡಿಯ ವಿಚಾರ’ ಎಂದು ಛೇಡಿಸಿದರು. ಜೆಡಿಎಸ್ ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಸಮರ್ಥನೆಗೂ ಒಂದು ಇತಿಮಿತಿ ಬೇಡವೇ?, ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ಆಡಳಿತ ಪಕ್ಷದ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ‘ಅಶೋಕ್ ಅವರು ಸಚಿವರಾಗಿದ್ದಾಗಲೂ ಹಣ ಪಡೆದ ಆರೋಪ ಬಂದಿದೆ. ಆದರೆ, ನಮ್ಮ ಮುಖ್ಯಮಂತ್ರಿ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂದಾಗ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಸರಕಾರ ಯಾವುದಾದರೂ ಇರಲಿ, ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.