×
Ad

ಪ್ರಾಂಶುಪಾಲರ ಹುದ್ದೆಗಳಿಗೆ ಮುಂಭಡ್ತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಮಧುಬಂಗಾರಪ್ಪ

Update: 2026-03-09 18:16 IST

ಬೆಂಗಳೂರು : ಪ್ರಸ್ತುತ ಖಾಲಿಯಿರುವ ಹಾಗೂ ಮುಂಬರುವ 6 ತಿಂಗಳಲ್ಲಿ ಖಾಲಿಯಾಗಲಿರುವ ಪ್ರಾಂಶುಪಾಲರ ಹುದ್ದೆಗಳಿಗೆ ಮುಂಭಡ್ತಿ ನೀಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.

ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣ ಇಲಾಖೆ(ಸರಕಾರಿ ಪದವಿ ಪೂರ್ವ ಕಾಲೇಜು)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರಿಂದ ವ್ಯಕ್ತಿ ಪೂರ್ವೋತ್ತರ ದಸ್ತಾವೇಜುಗಳು ನಿರ್ದೇಶನಾಲಯದಲ್ಲಿ ಸ್ವೀಕೃತವಾಗಿದ್ದು ಅವುಗಳು ಪರಿಶೀಲನೆಯ ಹಂತದಲ್ಲಿವೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನ್ಯಾಸಕರ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಸ್ವೀಕೃತವಾದ 461 ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕ್ರಮವಹಿಸಲಾಗುತ್ತಿದೆ ಎಂದು ಮಧುಬಂಗಾರಪ್ಪ ಹೇಳಿದರು.

ಉಪನ್ಯಾಸಕರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ನಂತರ ಸದರಿ ಪಟ್ಟಿಯಾನುಸಾರ ಮತ್ತು ಚಾಲ್ತಿಯಲ್ಲಿರುವ ಸರಕಾರದ ನಿಯಮಗಳನ್ವಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಪರಿಶೀಲಿಸಿ, ಪ್ರಾಂಶುಪಾಲರ ಹುದ್ದೆಗಳಿಗೆ ಮುಂಭಡ್ತಿ ನೀಡಲು ಪ್ರಸ್ತಾವವನ್ನು ಸಲ್ಲಿಸಿದ ನಂತರ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಮಧುಬಂಗಾರಪ್ಪ ಹೇಳಿದರು.

1,225 ಪ್ರಾಂಶುಪಾಲರ ವೃಂದದ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 306 ನೇರ ನೇಮಕಾತಿಗೆ ಮತ್ತು 919 ಭಡ್ತಿಗೆ ಮೀಸಲಿರುತ್ತವೆ. ನೇರ ನೇಮಕಾತಿಯ 306 ಹುದ್ದೆಗಳ ಪೈಕಿ 247 ಹುದ್ದೆಗಳನ್ನು ಸೇವಾ ನಿರತ ಉಪನ್ಯಾಸಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆಗಾಗಿ ಕೆಇಎಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಧುಬಂಗಾರಪ್ಪ ತಿಳಿಸಿದರು.

ಇನ್ನುಳಿದಂತೆ ಪ್ರಸ್ತುತ ಭಡ್ತಿ ಕೋಟಾದಡಿ ಖಾಲಿ ಇರುವ ಹಾಗೂ ಮುಂಬರುವ 6 ತಿಂಗಳಲ್ಲಿ ಖಾಲಿಯಾಗಲಿರುವ ಪ್ರಾಂಶುಪಾಲರ ಹುದ್ದೆಗಳಿಗೆ ಶಾಲಾ ಶಿಕ್ಷಣ ಇಲಾಖೆ(ಸರಕಾರಿ ಪದವಿ ಪೂರ್ವ ಕಾಲೇಜು) ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರಿಗೆ ಮುಂಭಡ್ತಿ ನೀಡಲು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಮಧುಬಂಗಾರಪ್ಪ ಹೇಳಿದರು.

ಪ್ರಸ್ತುತ ಖಾಲಿಯಿರುವ 561 ಪ್ರಾಂಶುಪಾಲರ ಹುದ್ದೆಗಳಿಗೆ ಆಯಾ ಕಾಲೇಜಿನ ಹಿರಿಯ ಉಪನ್ಯಾಸಕರುಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ-68 ರಡಿ ಪ್ರಾಂಶುಪಾಲರ ಹುದ್ದೆಗೆ ಪ್ರಭಾರದಲ್ಲಿರಿಸಿ ಶೈಕ್ಷಣಿಕ, ಆಡಳಿತಾತ್ಮಕ ಚಟುವಟಿಕೆ ಮತ್ತು ಪರೀಕ್ಷಾ ಕಾರ್ಯಗಳಿಗೆ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಮಧುಬಂಗಾರಪ್ಪ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News