×
Ad

ಪಶ್ಚಿಮ ಏಶ್ಯ ಸಂಘರ್ಷ ಹಿನ್ನೆಲೆ: ರಾಜ್ಯದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ : ಸಚಿವ ಚಲುವರಾಯಸ್ವಾಮಿ

Update: 2026-05-18 19:17 IST

ಬೆಂಗಳೂರು : ಪಶ್ಚಿಮ ಏಷ್ಯ ಸಂಘರ್ಷದಿಂದಾಗಿ ಆಮದಿನಲ್ಲಿ ಅಸ್ಥಿತರೆ ಉಂಟಾಗಿರುವ ಕಾರಣ ಮುಂಗಾರು ಹಂಗಾಮಿನಲ್ಲೂ ರಾಜ್ಯದಲ್ಲಿ ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಸೋಮವಾರ ಬೆಂಗಳೂರು ಪ್ರೆಸ್‍ಕ್ಲಬ್ ವತಿಯಿಂದ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಸಗೊಬ್ಬರ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಆಮದಿನಲ್ಲಿ ಅಸ್ಥಿರತೆ ಉಂಟಾಗಿದ್ದು, ಇದರಿಂದ ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದರು.

ಪ್ರೆಸ್ ಕ್ಲಬ್‍ನಲ್ಲಿಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಸಗೊಬ್ಬರ ಕೊರತೆ ಬಗ್ಗೆ ಕೇಂದ್ರದ ಜೊತೆ ಮಾತುಕತೆ ನಡೆಯುತ್ತಿದೆ. ರಸಗೊಬ್ಬರ ಬಳಕೆ ಕಡಿಮೆ ಬಳಕೆ ಹಾಗೂ ಪರ್ಯಾಯ ಗೊಬ್ಬರ ಮೂಲಗಳ ಬಳಕೆಗೆ ಕರೆ ನೀಡಲಾಗುತ್ತಿದೆ. ಜೂನ್‍ನಲ್ಲಿ ಮುಂಗಾರು ಆರಂಭವಾಗಲಿದೆ. ರಸಗೊಬ್ಬರ ಪೂರೈಕೆ ಸಮಸ್ಯೆ ಬಗ್ಗೆ ಪರಿಣಾಮಕಾರಿ ವಿಜಿಲೆನ್ಸಿ ಮಾಡಲು ಸೂಚಿಸಲಾಗಿದೆ. ಫ್ರೂಟ್ ಐಡಿ ಮೂಲಕ ರೈತರಿಗೆ ಮಾತ್ರ ಗೊಬ್ಬರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೂ 4.54 ಲಕ್ಷ ಮೆ.ಟನ್ ವಿವಿಧ ಗ್ರೇಡ್‍ನ ರಸಗೊಬ್ಬರ ಬೇಡಿಕೆಗೆ ಕೇಂದ್ರ ಸರಕಾರದಿಂದ 1.77 ಲಕ್ಷ ಮೆ.ಟನ್ ಮಾತ್ರ ಬಂದಿದೆ. ಉಳಿದ 2.77 ಲಕ್ಷ ಮೆ.ಟನ್ ಸರಬರಾಜು ಬಾಕಿ ಇದ್ದು, ಅದರಲ್ಲೂ ಯೂರಿಯಾ 0.65 ಲಕ್ಷ ಮೆ.ಟನ್, ಡಿಎಪಿ 0.78 ಲಕ್ಷ ಮೆ.ಟನ್ ಬಾಕಿ ಇದೆ.ಹೀಗಾಗಿ ಪರ್ಯಾಯವಾಗಿ ಜೈವಿಕ, ಸಾವಯುವ, ಹಸಿರೆಲೆ ಗೊಬ್ಬರಗಳನ್ನು ಬಳಕೆ ಮಾಡುವಂತೆ ಕರೆ ನೀಡಲಾಗಿದೆ.ಅದೇ ರೀತಿ, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಬಳಕೆ ಬಗ್ಗೆಯೂ ಜಾಗೃತಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಚಿವರು ಉಲ್ಲೇಖಿಸಿದರು.

ನಾವು ಕಳೆದ ಮೂರು ವರ್ಷಗಳಿಂದ ರೈತರಿಗೆ ಸ್ಪಂದಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಹಿಂದೆ ಆಗಿದ್ದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದೇವೆ. ಹಿಂದಿದ್ದ ಸರಕಾರಗಳು ಸಬ್ಸಿಡಿಗಳ ಹಣಕ್ಕಾಗಿ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದವು ಎಂಬ ದೂರಿತ್ತು. ಈಗ ಕ್ಯೂಆರ್ ಕೋಡ್ ಜಾರಿ ಮಾಡಿ ಪಾರದರ್ಶಕ ನೇರ ರೈತ ಯೋಜನೆ ಮತ್ತು ಪರಿಕರಗಳ, ಯಂತ್ರಗಳ ಸರಬರಾಜು ಮಾಡಲಾಗುತ್ತಿದೆ. ಅದೂ ಸಬ್ಸಿಡಿ ಮೂಲಕ ಎಂದು ಅವರು ತಿಳಿಸಿದರು.

ರೈತರ ಕೃಷಿ ಉಪಕರಣಗಳ ಸಬ್ಸಿಡಿ ಹೆಚ್ಚಿಸಿದ್ದೇವೆ. ಅವುಗಳ ಮೂಲ ಬೆಲೆಯ ಅರ್ಧದಷ್ಟು ಸಬ್ಸಿಡಿ ಕೊಡಿಸುತ್ತಿದ್ದೇವೆ. ಅರ್ಹ ಫಲಾನುಭವಿಗಳಿಗೆ ಇವು ತಲುಪುತ್ತಿವೆ. ಸೂಕ್ಷ್ಮ ನೀರಾವರಿ ಯೋಜನೆಯಲ್ಲೂ ಸಾವಿರ ಕೋಟಿ ಯೋಜನೆ ಹಂಚಿಕೆ ಆಗಿದೆ. ಮಣ್ಣು ಪರೀಕ್ಷೆ ಮೂಲಕ ರೈತರ ಬೆಳೆ ಪದ್ದತಿ ಬದಲಾವಣೆ ಮತ್ತು ಅಳವಡಿಕೆ ಬಗ್ಗೆ ಶಿಕ್ಷಣ, ಪರಿಣಿತಿ ಒದಗಿಸಲಾಗುತ್ತಿದೆ. ಕೃಷಿ ಹೊಂಡಗಳ ಮೂಲಕ ಬೆಳೆಗಳ ನೀರಿನ ಬವಣೆ ತಪ್ಪಿಸಲಾಗುತ್ತಿದೆ. ಕೇಂದ್ರ ಕೃಷಿ ಸಚಿವರೇ ಹೊಗಳಿದಂತೆ ಸಿರಿಧಾನ್ಯ ಮೇಳ, ಮತ್ತು ಬೆಳೆ ಕಾರ್ಯ ಬಗ್ಗೆ ಪ್ರಗತಿ ಸಾಧಿಸಿದ್ದೇವೆ. ನಮ್ಮ ರಾಜ್ಯವೊಂದರಲ್ಲೇ 58 ಕೃಷಿ ಲ್ಯಾಬ್‍ಗಳಿವೆ ಎಂದು ಅವರು ಹೇಳಿದರು.

40 ಲಕ್ಷ ಜನ ರೈತರಿಗೆ 470 ಕೋಟಿ ಸಹಾಯಧನ ನೀಡಲಾಗಿದೆ. ಕೇಂದ್ರದಿಂದ ನಮ್ಮ ಪಾಲಿನ 20 ಸಾವಿರ ಕೋಟಿ ಅನುದಾನ ಬರುವುದಕ್ಕೆ ಬಾಕಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ಇಲ್ಲಿಯವರೆಗೆ 3,454 ಕೋಟಿ ರೂ. ಮಾತ್ರ ಅನುದಾನ ನೀಡಿದೆ ಎಂದೂ ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ.ಸುರೇಶ್, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಪ್ರಮುಖರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News