×
Ad

ʼದಸರಾʼ ನಾಡಹಬ್ಬವೇ ಹೊರತು, ದ್ವೇಷ ರೂಪಿಸುವ ಆರೆಸ್ಸೆಸ್ ಕಚೇರಿಗೆ ಸಂಬಂಧಿಸಿದ ಹಬ್ಬವಲ್ಲ: ಸಚಿವ ಡಾ.ಮಹದೇವಪ್ಪ

Update: 2025-09-07 18:32 IST

ಬೆಂಗಳೂರು, ಸೆ.7: ‘ದಸರಾ ಉತ್ಸವ ಎಂಬುದು ಎಲ್ಲರನ್ನೂ ಒಳಗೊಂಡಂತಹ ನಾಡಹಬ್ಬವೇ ಹೊರತು, ಬಿಜೆಪಿ ಕಚೇರಿಗಾಗಲೀ ಅಥವಾ ಅವರನ್ನು ಹೀಗೆ ದ್ವೇಷಮಯವಾಗಿ ರೂಪಿಸುವ ಆರೆಸ್ಸೆಸ್ ಕಚೇರಿಗೆ ಸಂಬಂಧಿಸಿದ ಹಬ್ಬವಲ್ಲ. ಈ ಸಂಗತಿಯನ್ನು ಬಿಜೆಪಿಗರು ಬೇಗ ಅರಿತರೆ ಉತ್ತಮ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ದಸರಾ ಉದ್ಘಾಟನೆಯನ್ನು ನೆರವೇರಿಸಲಿರುವ ಲೇಖಕಿ ಬಾನು ಮುಷ್ತಾಕ್ ಅವರು ತಮ್ಮ ಸುತ್ತಲಿನ ಸಾಮಾಜಿಕ ಪಿಡುಗುಗಳ ವಿರುದ್ಧ, ತಮ್ಮೊಳಗಿನ ಧಾರ್ಮಿಕ ಸಂಕೋಲೆಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದವರು. ರೈತರು, ಮಹಿಳೆಯರ ಪರವಾದ ಧ್ವನಿಯಾಗಿ ಹಲವು ಕಾಲ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರಿಗೆ ಇತ್ತೀಚೆಗೆ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರುವುದು ನಾವೆಲ್ಲರೂ ಸಹಜವಾಗಿ ಹೆಮ್ಮೆ ಪಡಬೇಕಾದ ಸಂಗತಿ ಎಂದು ತಿಳಿಸಿದ್ದಾರೆ.

ನಾಡು ನುಡಿ ಸಂಸ್ಕೃತಿ ಮತ್ತು ಸಾಹಿತ್ಯದ ಗಂಧಗಾಳಿ ಇಲ್ಲದೇ ಬರೀ ದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿಗರು ಒಬ್ಬ ಮಹಿಳೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಗರಿಂದಲೇ ಛೀಮಾರಿ ಹಾಕಿಸಿಕೊಂಡು, ಟಿಕೆಟ್ ತಪ್ಪಿದ ಕ್ಷಣದಿಂದ ವಿಚಲಿತರಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಬಾನು ಮುಷ್ತಾಕ್‍ರ ಆಯ್ಕೆಯ ವಿರುದ್ಧ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅವರು ಈ ಅರ್ಜಿಯಲ್ಲಿ ದ್ವೇಷದ ಹಿತಾಸಕ್ತಿ ಬಿಟ್ಟರೆ, ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ ಎಂಬುದು ಸ್ಪಷ್ಟ. ಇವರ ಕೋಮು ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಡಾ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಸಾಹಿತ್ಯದ ಮೂಲಕ ನಾಡಿಗೆ ಹೆಸರು ತಂದವರನ್ನು ಜಾತಿ, ಧರ್ಮದ ಮೇಲೆ ಅಳೆಯುವುದು, ಅವರ ಅರ್ಹತೆಯನ್ನು ಪ್ರಶ್ನಿಸುವುದು ಮನುವಾದದ ಮೂಲ ಗುಣ. ಆದರೆ ಈ ನೆಲದಲ್ಲಿ ಸಂವಿಧನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಬಗ್ಗೆ ತಿಳುವಳಿಕೆಯೂ ಬಲವಾಗಿ ಇರುವುದರಿಂದ ಈ ಮನುವಾದಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಅವರೊಬ್ಬರೇ ಸಾಕು ಎಂದು ಡಾ.ಮದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News