×
Ad

ರಾಜ್ಯ ಸರಕಾರದಲ್ಲಿ ಹೊಸದಾಗಿ ʼಪ್ರಜಾ ಸೇವೆʼ ಇಲಾಖೆ ಆರಂಭ: ಸಿಎಂ ಡಿ.ಕೆ. ಶಿವಕುಮಾರ್

Update: 2026-06-20 16:21 IST

ಬೆಂಗಳೂರು: ಸಾರ್ವಜನಿಕ ಅಹವಾಲುಗಳು, ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಲ್ಲಿ ಹೊಸದಾಗಿ ಪ್ರಜಾ ಸೇವೆ ಇಲಾಖೆಯನ್ನು ಆರಂಭಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು, ಸಂಘ ಸಂಸ್ಥೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ, ಸತ್ಯಾಗ್ರಹಗಳನ್ನು ನಡೆಸಿ ತಮ್ಮ ಭಾವನೆಗಳನ್ನು, ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಗಮನ ಸೆಳೆಯುತ್ತಾರೆ ಎಂದರು.

ಸಾಮಾನ್ಯ ಕಾನೂನು ರೀತಿ ಬಗೆಹರಿಸಬಹುದಾದ ಸಮಸ್ಯೆಗಳು ಇದ್ದಲ್ಲಿ ನಾವು ಅವರಿಗೆ ನ್ಯಾಯ ಕೊಡಿಸಲು ಸಾಧ್ಯವೇ? ಎಂದು ಪರಿಶೀಲಿಸಬಹುದು. ನಮ್ಮಿಂದ ಅಥವಾ ಅಧಿಕಾರಿಗಳಿಂದ ಏನಾದರೂ ತಪ್ಪು ಆಗಿದ್ದರೆ ಅದನ್ನು ಸರಿಪಡಿಸುವುದು ಮುಖ್ಯವಾದ ವಿಚಾರ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರತ್ಯೇಕವಾದ ಪ್ರಜಾ ಸೇವೆ ಇಲಾಖೆಯನ್ನು ಸೃಷ್ಟಿಸಿ, ಅದಕ್ಕೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗುವುದು. ಹಿರಿಯ ಐಎಎಸ್ ಅಧಿಕಾರಿಯನ್ನು ಈ ಇಲಾಖೆಗೆ ನಿಯೋಜನೆ ಮಾಡುತ್ತೇವೆ. ಅಹವಾಲುಗಳನ್ನು ಪಡೆದು ಪರಿಶೀಲಿಸಿ, ಸಂಬಂಧಪಟ್ಟವರಿಗೆ ಮಾಹಿತಿ ಕೊಟ್ಟು, ಸಾರ್ವಜನಿಕರಿಗೆ ಎಷ್ಟು ನ್ಯಾಯ ಒದಗಿಸಲು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರ, ತಾಲೂಕಿಗೆ ಭೇಟಿ ನೀಡಿ ಸ್ಥಳೀಯ ಶಾಸಕರನ್ನು ಜೊತೆಯಲ್ಲಿರಿಸಿಕೊಂಡು ಜನಸಂಪರ್ಕ, ಜನಸ್ಪಂದನ ಸಭೆಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಆ ಸಭೆಯಲ್ಲಿ ಸಲ್ಲಿಕೆಯಾಗುವ ಅಹವಾಲುಗಳು, ಸಮಸ್ಯೆಗಳ ಮಾಹಿತಿಯನ್ನು ಈ ನೂತನ ಇಲಾಖೆಯ ಗಮನಕ್ಕೆ ತರಬೇಕು. ಶಾಸಕರಿಗೆ ಈ ನಿಟ್ಟಿನಲ್ಲಿ ಏನೆಲ್ಲ ಕೆಲಸ ಮಾಡಬೇಕು ಎಂಬುದರ ಕುರಿತು ಶೀಘ್ರವೆ ಮಾಹಿತಿಗಳನ್ನು ನೀಡುತ್ತೇವೆ ಎಂದು ಸಿಎಂ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News