ಪೋಕ್ಸೊ ಪ್ರಕರಣ; ವಚನಾನಂದ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ, ಪ್ರಕರಣ ಸಂಬಂಧ ಜಾಮೀನು (ರೆಗ್ಯುಲರ್ ಬೇಲ್) ಕೋರಿ ಸಕ್ಷಮ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ನಿರೀಕ್ಷಣಾ ಜಾಮೀನಿನ ಅವಧಿಯನ್ನು 3 ವಾರಗಳವರೆಗೆ ಮುಂದುವರಿಸಿದೆ.
ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ 2026ರ ಮೇ 6ರಂದು ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಎರಡನೇ ಪ್ರತಿವಾದಿ (ವಚನಾನಂದ ಸ್ವಾಮೀಜಿ) ಪರ ವಕೀಲರು ತಿಳಿಸಿದ್ದಾರೆ. ಕಾನೂನಿನ ಪ್ರಕಾರ ಒಮ್ಮೆ ನಿರೀಕ್ಷಣಾ ಜಾಮೀನು ಮಂಜೂರಾದರೆ, ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರವೂ ಅದು ಮುಂದುವರಿಯುತ್ತದೆ. ಈ ವಿಚಾರವನ್ನು ನ್ಯಾಯಾಲಯ ಈಗ ಪರಿಶೀಲಿಸುತ್ತಿಲ್ಲ. ಆದರೆ, ಹಾಲಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಧಾನ ಈ ನ್ಯಾಯಾಲಯಕ್ಕೆ ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ದೂರು ದಾಖಲಾಗುವುದಕ್ಕೂ ಒಂದು ವಾರ ಮುಂಚಿತವಾಗಿ ಪೋಕ್ಸೊ ಕಾಯ್ದೆ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಆದ್ದರಿಂದ, ಅಪರಾಧದ ಸ್ವರೂಪ ಹಾಗೂ ಜಾಮೀನು ಮಂಜೂರು ಮಾಡಿರುವ ವಿಧಾನವೇ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಕಾರಣವಾಗಿದೆಯೇ ಹೊರತು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕಲ್ಲ. ಜತೆಗೆ, ಪೋಕ್ಸೊ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತರ ವಾದ ಆಲಿಸದೇ ಇರುವುದೂ ಸಹ ನಿರೀಕ್ಷಣಾ ಜಾಮೀನು ರದ್ದತಿಗೆ ಪ್ರಬಲ ಕಾರಣವಾಗಿದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿತು.
ಇದೇ ವೇಳೆ, ವಚನಾನಂದ ಸ್ವಾಮೀಜಿಗೆ ನಿಯಮಿತ ಜಾಮೀನು (ರೆಗ್ಯುಲರ್ ಬೈಲ್) ಕೋರಿ ಸಕ್ಷಮ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ, ನಿರೀಕ್ಷಣಾ ಜಾಮೀನನ್ನು ಮೂರು ವಾರಗಳ ಅವಧಿಗೆ ವಿಸ್ತರಿಸಿದ ನ್ಯಾಯಪೀಠ, ವಚನಾನಂದ ಸ್ವಾಮೀಜಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ತಕ್ಷಣ ವಿಚಾರಣಾ ನ್ಯಾಯಾಲಯವು ಆ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರ್ದೇಶನಗಳ ಅನುಸಾರ ತ್ವರಿತವಾಗಿ ನಿರ್ಧರಿಸಬೇಕು. ಜಾಮೀನು ಅರ್ಜಿ ಪರಿಗಣಿಸುವಾಗ ಈ ಆದೇಶದಲ್ಲಿ ನ್ಯಾಯಾಲಯ ಅವಲೋಕಿಸಿದ ವಿಚಾರಗಳಿಂದ ಪ್ರಭಾವಕ್ಕೊಳಗಾಗದೇ ಅರ್ಜಿಯ ವಿಚಾರಣಾ ಅರ್ಹತೆಯ ಆಧಾರದಲ್ಲಿ ಪರಿಗಣಿಸಬೇಕು ಎಂದು ನಿರ್ದೇಶಿಸಿತು.
ಹೆಸರಷ್ಟೇ ವಚನಾನಂದ, ವಚನ ಹೇಳಬೇಡಿ;
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಚನಾನಂದ ಸ್ವಾಮೀಜಿ ದೂರುದಾರರಿಗೆ ಬೆದರಿಕೆಯೊಡ್ಡಿದ್ದು, ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ ಎಂದು ಕೋರ್ಟ್ಗೆ ತಿಳಿಸಿದರು. ಸ್ವಾಮೀಜಿ ಪರ ವಕೀಲರು, ಅದು ಯಾರೋ ಬೇರೆಯವರು ಮಾಡಿದ್ದಾರೆ. ಸ್ವಾಮೀಜಿಗೂ ಅವರಿಗೂ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಿದರು. ಈ ಹಂತದಲ್ಲಿ ನ್ಯಾಯಪೀಠ, ನೀವು ಜಾಮೀನು ಪಡೆಯುವವರೆಗೆ ಯಾವ ವಚನವನ್ನೂ ಹೇಳಬೇಡಿ. ಹೆಸರು ಮಾತ್ರ ವಚನಾನಂದ, ಸುಮ್ಮನಿದ್ದುಬಿಡಿ. ಸಾಕ್ಷಿಗಳಿಗೇಕೆ ಬೆದರಿಕೆ ಹಾಕಿದ್ದೀರಿ? ಎಂದು ಪ್ರಶ್ನಿಸಿತು.