ಪೊಲೀಸ್ ಇಲಾಖೆ ಸಭೆಗಳಲ್ಲಿ ದಲಿತ ಪದ ಬಳಸದಂತೆ ಸೂಚನೆ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಪೊಲೀಸ್ ಇಲಾಖೆಯ ಸಭೆಗಳಲ್ಲಿ ‘ದಲಿತ’ ಎಂಬ ಪದ ಬಳಸದಂತೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ (ಡಿಜಿಪಿ) ಕಚೇರಿಯಿಂದ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಠಾಣೆಗಳು ಹಾಗೂ ಪೊಲೀಸ್ ಕಚೇರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸಲು ನಡೆಯುವ ಸಭೆಗಳನ್ನು ದಲಿತ ಸಭೆ ಎಂದು ಕರೆಯಲಾಗುತ್ತಿದೆ. ಈ ಪದಪ್ರಯೋಗ ಅಸಂವಿಧಾನಿಕವಾಗಿದೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದೂರು ನೀಡಿದ್ದರು.
ದೂರನ್ನು ಪರಿಗಣಿಸಿರುವ ಪೊಲೀಸ್ ಇಲಾಖೆಯು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ನಗರ ಪೊಲೀಸ್ ಆಯುಕ್ತರು, ವಲಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದೆ. ಇನ್ನು ಮುಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು-ಕೊರತೆ ಸಭೆಗಳಿಗೆ ದಲಿತ ಸಭೆ ಎಂಬ ಪದ ಬಳಸದೆ, ಸೂಕ್ತ ಅಧಿಕೃತ ಪದಪ್ರಯೋಗ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.