ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಕೂಡಲೇ ಈಡೇರಿಸುವಂತೆ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ

ಜುಲೈ 20 ರಿಂದ ಆಗಸ್ಟ್ 5 ರವರೆಗೆ ರಾಜ್ಯಾದ್ಯಂತ ಆಗ್ರಹ ಅಭಿಯಾನ

Update: 2026-07-20 15:30 IST

ಬೆಂಗಳೂರು : ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದರೂ, 2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯ, ಪ್ರಚಾರ ಭಾಷಣಗಳಲ್ಲಿ ಹಾಗೂ ಅಧಿಕಾರಕ್ಕೆ ಬಂದ ಬಳಿಕ ನೀಡಿರುವ ಪ್ರಮುಖ ಹತ್ತು ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ. ಕೂಡಲೇ 2ಬಿ ಮೀಸಲಾತಿ ಮರು ಸ್ಥಾಪನೆ ಸೇರಿದಂತೆ ಎಲ್ಲ ಭರವಸೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಸುಹೇಲ್ ಅಹ್ಮದ್ ಮರೂರ್ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ ವಿರುದ್ಧ ಕಠಿಣ ಕಾನೂನು ಕ್ರಮ, ಗೋಹತ್ಯಾ ನಿಷೇಧ ಕಾಯ್ದೆಗೆ ತಿದ್ದುಪಡಿ, ಮತಾಂತರ ನಿರ್ಬಂಧ ಕಾಯ್ದೆ ವಾಪಸ್, ಜಾತಿ ಸಮೀಕ್ಷೆ ವರದಿ ಜಾರಿ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಬಜೆಟ್ ಹಂಚಿಕೆ, ವಕ್ಫ್ ಅಸ್ತಿಗಳ ರಕ್ಷಣೆಗೆ ಕ್ರಮ, ಮುಸ್ಲಿಮರಿಗೆ ಜನಸಂಖ್ಯೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಮುಸ್ಲಿಮರ ಶೈಕ್ಷಣಿಕ ಏಳಿಗೆಗೆ ನೆರವು ಹಾಗು ಎಸ್‌ಐಆರ್ ವಿರುದ್ಧ ರಾಜಕೀಯ ರಣತಂತ್ರ ಇವುಗಳನ್ನು ಕೂಡಲೇ ಈಡೇರಿಸಬೇಕು ಎಂದರು.

ಮೇ 16ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಮುಸ್ಲಿಮ್ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಕುರಿತು ವರದಿ ಹಾಗು ಕಾಂಗ್ರೆಸ್ ಪಕ್ಷ ನೀಡಿರುವ ಪ್ರಮುಖ ಹತ್ತು ಭರವಸೆಗಳನ್ನು ಈಡೇರಿಸುವ ಆಗ್ರಹಗಳಿದ್ದ ಪುಸ್ತಕವನ್ನು ಕನ್ನಡ, ಇಂಗ್ಲಿಷ್ ಹಾಗು ಉರ್ದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಅದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರುಗಳಿಗೆ ತಲುಪಿಸಲಾಗಿತ್ತು. ಮುಸ್ಲಿಂ ಸಮಾವೇಶ ಘೋಷಿಸಿ ಒಂದು ವಾರದೊಳಗೆ ಸರಕಾರ ಹಿಜಾಬ್ ಮೇಲಿನ ನಿರ್ಬಂಧವನ್ನು ವಾಪಸ್ ಪಡೆಯಿತು ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ಸರಕಾರ ತಾನೇ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಸಮುದಾಯದಲ್ಲಿ ಅಪನಂಬಿಕೆ ಮೂಡಲು ಕಾರಣವಾಗುತ್ತದೆ. ಇದಕ್ಕೆ ಸರಕಾರ ಅವಕಾಶ ನೀಡಬಾರದು. ಈ ಬಗ್ಗೆ ಸರಕಾರವನ್ನು ಎಚ್ಚರಿಸಿ ಆಗ್ರಹಿಸಲು ಕೆಆರ್‌ಎಂಒ ರಾಜ್ಯಾದ್ಯಂತ ಆ.5ರ ವರೆಗೆ ಆಗ್ರಹ ಅಭಿಯಾನವನ್ನು ನಡೆಸುತ್ತಿದೆ. ಈ ಅವಧಿಯಲ್ಲಿ ಒಕ್ಕೂಟವು ರಾಜ್ಯಾದ್ಯಂತ ಪ್ರತಿನಿಧಿಗಳು ಸಮುದಾಯದ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಮಸೀದಿ ಜಮಾಅತ್ ಗಳು ಹಾಗೂ ಉಲೆಮಾಗಳ ಸಹಕಾರ ಪಡೆದು ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ. ಇದರಲ್ಲಿ ರಾಜ್ಯದ ಎಲ್ಲ ಶಾಸಕರು ಹಾಗೂ ಪ್ರಭಾವೀ ರಾಜಕೀಯ ನಾಯಕರಿಗೆ ಆಗ್ರಹಗಳ ಪುಸ್ತಕವನ್ನು ನೀಡಿ ಸರಕಾರಕ್ಕೆ ಒತ್ತಡ ಹಾಕುವಂತೆ ಮನವಿ ಮಾಡಲಾಗುತ್ತದೆ ಎಂದು ಸುಹೇಲ್ ಅಹ್ಮದ್ ಮರೂರ್ ತಿಳಿಸಿದರು.

ಒಕ್ಕೂಟದ ಸಂಚಾಲಕ ಯಹ್ಯಾ ದಾಮೂದಿ ಮಾತನಾಡಿ, ಉಲೆಮಾಗಳು ಹಾಗೂ ಧಾರ್ಮಿಕ ಸಂಘಟನೆಗಳ ಮೂಲಕ ಸರಕಾರಕ್ಕೆ ಆಗ್ರಹ ಸಲ್ಲಿಸುವುದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸುವುದು, ಶುಕ್ರವಾರ ಜುಮಾ ನಮಾಝ್‌ ಬಳಿಕ ಮಸೀದಿಗಳಲ್ಲಿ ಕರಪತ್ರ ಹಂಚುವುದು ಹಾಗೂ ಸಹಿ ಸಂಗ್ರಹ, ಗಣ್ಯರು ಹಾಗೂ ಬುದ್ದಿ ಜೀವಿಗಳಿಂದ ಸರಕಾರಕ್ಕೆ ಪತ್ರ ಬರೆಸುವುದು, ಕ್ರೈಸ್ತ ಸಮುದಾಯದ ಧಾರ್ಮಿಕ ಮುಖಂಡರು, ನಾಯಕರು, ರೈತ ಸಂಘಟನೆಗಳನ್ನು ಭೇಟಿಯಾಗಿ ಅವರಿಂದಲೂ ಸರಕಾರಕ್ಕೆ ಆಗ್ರಹ ಸಲ್ಲಿಸುವುದು ಮುಂತಾದ ಚಟುವಟಿಕೆಗಳನ್ನು ನಡೆಯಲಾಗುತ್ತದೆ ಎಂದು ನುಡಿದರು.

ಈ ಅಭಿಯಾನದ ಬಳಿಕ ದಾವಣಗೆರೆಯಲ್ಲಿ ಮುಸ್ಲಿಮ್ ಸಮಾವೇಶ ನಡೆಸಿ ಅಲ್ಲಿಯೂ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಸಮಾವೇಶದ ದಿನಾಂಕವನ್ನು ಮುಂದಿನ ದಿನಗಳಲ್ಲಿತಿಳಿಸಲಾಗುತ್ತದೆ. ಆ ಬಳಿಕ ಮಂಗಳೂರಿನಲ್ಲೂ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಹಾಗಾಗಿ ಸರಕಾರ ತಾನು ನೀಡಿರುವ ನ್ಯಾಯಯುತ ಭರವಸೆಗಳನ್ನು ತಡಮಾಡದೆ ಈಡೇರಿಸಬೇಕು ಎಂದು ಯಹ್ಯಾ ದಾಮೂದಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕರಾದ ಹಾರಿಸ್ ಸಿದ್ದಿಕಿ, ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News