ಬೆಂಗಳೂರು : ರಾಜ್ಯದ ಗಂಭೀರ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಸೆ.21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ರಾಜ್ಯದ ಗಂಭೀರ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಇದೇ ತಿಂಗಳ 21, 23 ಮತ್ತು 24 ರಂದು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ಸರಕಾರ ತೀರ್ಮಾನ ಕೈಗೊಂಡಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಈ ಬಾರಿ ತೀವ್ರ ಸ್ವರೂಪದ ಬರಗಾಲ ಎದುರಾಗಿದ್ದು, ಆರ್ಥಿಕತೆ, ಆಹಾರ ಉತ್ಪಾದನೆ ಸೇರಿದಂತೆ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ರೈತರ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಇದರ ಜತೆಗೆ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಈಗಾಗಲೇ ನಾಲ್ಕೈದು ಬಾರಿ ತಿರಸ್ಕರಿಸಿದೆ. ಈ ಎಲ್ಲ ಪ್ರಮುಖ ವಿಷಯಗಳ ಸಮಗ್ರ ಚರ್ಚೆಗಾಗಿ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ತಿಳಿಸಿದರು.

ಮತ್ತೊಂದೆಡೆ ಬರಗಾಲ ಹಿನ್ನೆಲೆ ಜಾನುವಾರುಗಳ ಮೇವು ಖರೀದಿಗೆ ತಕ್ಷಣವೇ 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದ ಅವರು, ನೈಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡಿ ಪರಿಹಾರ ವಂಚಿತರಾಗಿದ್ದ ರೈತರ ಬಹುದಿನಗಳ ಸಮಸ್ಯೆಗೆ ಸಂಪುಟದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಮೂಲ ಒಪ್ಪಂದದಂತೆ 1 ಎಕರೆ ಒಳಗಿನ ಭೂಮಾಲೀಕರಿಗೆ 30x40 ಹಾಗೂ 1 ಎಕರೆಗಿಂತ ಹೆಚ್ಚಿನ ಜಮೀನು ಕಳೆದುಕೊಂಡವರಿಗೆ 60x40 ಅಳತೆಯ ನಿವೇಶನ ನೀಡಲು ತೀರ್ಮಾನಿಸಲಾಗಿದೆ.

ಭೂಮಿ ಕಳೆದುಕೊಂಡಿರುವ ಒಟ್ಟು 1,453 ರೈತರಿಗೆ ನಾಲ್ಕು ಕಡೆ ನಿವೇಶನ ನೀಡಲಾಗುವುದು. ಸದ್ಯ ನೈಸ್ ಸಂಸ್ಥೆಯಿಂದ 574 ನಿವೇಶನಗಳು ಲಭ್ಯವಿದ್ದು, ಬಾಕಿ ಉಳಿದವರಿಗೆ ವರಾಹಸಂದ್ರ, ಶ್ರೀಕಂಠಪುರ ಹಾಗೂ ಮಾದಾವರ ವ್ಯಾಪ್ತಿಯಲ್ಲಿ ಲಭ್ಯವಿರುವ ಭೂಮಿಯಲ್ಲಿ ಹೊಸದಾಗಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಹೊಸ ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಅನಿವಾಸಿ ಭಾರತೀಯರ ವ್ಯವಹಾರ ಮತ್ತು ಕಲ್ಯಾಣ ನೀತಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ವಿದೇಶಿ ಬಂಡವಾಳ ಹೂಡಿಕೆದಾರರು, ಸಂಶೋಧನೆ, ಅಭಿವೃದ್ಧಿ ಹಾಗೂ ನಾವೀನ್ಯತೆ ಕ್ಷೇತ್ರದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸ್ವೀಕರಿಸಲು, ವಿದೇಶಿ ನಿಯೋಗಗಳ ಸತ್ಕಾರಕ್ಕೆ ಮತ್ತು ಎನ್ಆರ್ಐ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ 'ರಾಜ್ಯ ಫೆಸಿಲಿಟೇಷನ್ ಕೌನ್ಸಿಲ್' ಅನ್ನು ರಚಿಸಲಾಗಿದೆ. ಜತೆಗೆ ಬಂಡವಾಳ ಸೆಳೆಯಲು ಏಪ್ರಿಲ್ 20 ರಿಂದ 23 ರವರೆಗೆ ಬೆಂಗಳೂರಿನಲ್ಲಿ 'ಇನ್ವೆಸ್ಟ್ ಕರ್ನಾಟಕ' ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಇನ್ನೂ, ಸಾರಿಗೆ ಕ್ಷೇತ್ರದಲ್ಲಿ ಪರಿಸರಸ್ನೇಹಿ ವ್ಯವಸ್ಥೆ ಜಾರಿಗೆ ತರಲು ಕೇಂದ್ರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಸುಮಾರು 1.2 ಕೋಟಿಯಿಂದ 1.5 ಕೋಟಿ ರೂಪಾಯಿ ಮೌಲ್ಯದ ಒಟ್ಟು 4,500 ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 6 ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ. ಇದರೊಂದಿಗೆ ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಪರಿಷ್ಕೃತ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ಸಿಎಸ್-ಉಡಾನ್ 6.0) ಅಡಿಯಲ್ಲಿ ಒಪ್ಪಂದ (MoU) ಮಾಡಿಕೊಳ್ಳಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor