ಬೆಂಗಳೂರು : ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಒಟ್ಟು 29,679 ಕೋಟಿ ರೂ. ಬಂಡವಾಳ ಹೂಡಿಕೆಯ 9 ಹೊಸ ಮತ್ತು ಹೆಚ್ಚುವರಿ ಹೂಡಿಕೆಯ 8 ಯೋಜನಾ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಗಳಿಂದ ಒಟ್ಟು 66,360 ಉದ್ಯೋಗಗಳು ಸೃಷ್ಟಿಯಾಗಲಿವೆ.

ಬುಧವಾರ ನಗರದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಹೊಸ ಹೂಡಿಕೆ ಯೋಜನೆಗಳ ಅಡಿಯಲ್ಲಿ ವೈಬ್ರನ್ಸಿ ರೆನ್ಯೂಅಬಲ್ ಎನರ್ಜೀಸ್ 2,194 ಕೋಟಿ ರೂ. ಹೂಡಲಿದ್ದು, 30 ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಹಾಗೆಯೇ ಮಹೀಂದ್ರ ಏರೋಸ್ಟ್ರಕ್ಚರ್ಸ್ 2,300 ಕೋಟಿ ರೂ. (3,000 ಉದ್ಯೋಗ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ 1,104 ಕೋಟಿ ರೂ. (4,813 ಉದ್ಯೋಗ), ಹೀರೋ ಫ್ಯೂಚರ್ ಎನರ್ಜೀಸ್ 9,760 ಕೋಟಿ ರೂ. (3,200 ಉದ್ಯೋಗ), ಎಪ್ಸಿಲಾನ್ 1,500 ಕೋಟಿ ರೂ., ಟೊಯೋಟಾ ಕಿರ್ಲೋಸ್ಕರ್ 1,200 ಕೋಟಿ ರೂ., ನಿರಾಣಿ ಶುಗರ್ಸ್ 4,062 ಕೋಟಿ ರೂ., ಟ್ರೂಆಲ್ಟ್ ಬಯೋ ಎನರ್ಜಿ 2,988 ಕೋಟಿ ರೂ. ಮತ್ತು ಲೈಟ್‌ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ 600 ಕೋಟಿ ರೂ. ಬಂಡವಾಳ ತೊಡಗಿಸಲಿವೆ.

ಮಿಕ್ಕಂತೆ ಎಂಎಸ್ಪಿಎಲ್ ಕಂಪೆನಿಯು 884.25 ಕೋಟಿ ರೂ., ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ 250 ಕೋಟಿ ರೂ., ಹೋಂಡಾ ಕಾರ್ಸ್ 437 ಕೋಟಿ ರೂ., ಭೀಮಾ ಫೈನ್ ಕೆಮಿಕಲ್ಸ್ 605 ಕೋಟಿ ರೂ., ಸನ್ಸೇರಾ 492.24 ಕೋಟಿ ರೂ., ಟಿವಿಎಸ್ ಮೋಟಾರ್ಸ್ 1,050 ಕೋಟಿ ರೂ. ಮತ್ತು ಹ್ಯಾವೆಲ್ಸ್ ಇಂಡಿಯಾ 250 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.

ಕೈಗಾರಿಕೆಗಳಿಗೆ ಪರವಾನಿಗೆ ನೀಡುವ ಯೋಜನಾ ವರದಿಗಳನ್ನು ಸರಿಯಾಗಿ ಪರಿಶೀಲಿಸಬೇಕು. ಯೋಜನೆಗೆ ಪರವಾನಿಗೆ ಪೂರ್ವದಲ್ಲಿ ಆಡಿಟ್ ಕಡ್ಡಾಯವಾಗಿ ನಡೆಸಬೇಕು. ಇದಕ್ಕಾಗಿ ಹೊಸ ಆಡಿಟ್ ತಂಡವನ್ನು ರಚಿಸಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್, ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಪಿ.ಎಂ. ನರೇಂದ್ರ ಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor