×
Ad

ಬೆಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ

Update: 2026-05-17 18:38 IST

ಬೆಂಗಳೂರು : ಬೆಂಗಳೂರು-ಮುಂಬೈ ನಡುವಿನ ಹೊಸ ಎಕ್ಸ್‌ಪ್ರೆಸ್ ರೈಲು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ರವಿವಾರ ನಗರದ ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ.ವಿ.ಟಿ ಹಾಗೂ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವಿನ ಹೊಸ ದ್ವೈ-ಸಾಪ್ತಾಹಿಕ ರೈಲು ಸೇವೆಗೆ ವರ್ಚುವಲ್ ಆಗಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ದಕ್ಷಿಣ ಮತ್ತು ಉತ್ತರ ಕರ್ನಾಟಕದ ಬಹುಕಾಲದ ಬೇಡಿಕೆಗಳನ್ನು ಈಗ ಈಡೇರಿಸಲಾಗುತ್ತಿದೆ. ಇದಲ್ಲದೆ, ಬೆಂಗಳೂರು ಮತ್ತು ಮುಂಬೈ ನಡುವಿನ ವಂದೆ ಭಾರತ್ ಸ್ಲೀಪರ್ ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ ಅಶ್ವಿನಿ ವೈಷ್ಣವ್, ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ನಿಧಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದ್ದು, ಕರ್ನಾಟಕದಾದ್ಯಂತ ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲಾಗಿದೆ ಎಂದು ಹೇಳಿದರು.

ಅಮೃತ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ, 2,160 ಕೋಟಿ ರೂ.ವೆಚ್ಚದಲ್ಲಿ 61 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, 9 ಈಗಾಗಲೆ ಪೂರ್ಣಗೊಂಡಿವೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು 485 ಕೋಟಿ ರೂ. ಮತ್ತು ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂ.ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

2014 ರಿಂದ, ಕರ್ನಾಟಕದಲ್ಲಿ ಸುಮಾರು 1,750 ಕಿ.ಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಮತ್ತು ಹಾಸನ-ಮಂಗಳೂರು ವಿಭಾಗದಲ್ಲಿ ಸಂಕೀರ್ಣ ವಿದ್ಯುದ್ದೀಕರಣ ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಪರೀಕ್ಷಾರ್ಥ ಕಾರ್ಯಗಳು ನಡೆಯುತ್ತಿವೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕುರಿತು, ನಾಲ್ಕು ಕಾರಿಡಾರ್‍ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್‍ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣದ ಕೆಲಸಗಳು ಪ್ರಗತಿಯಲ್ಲಿವೆ. ಕೆಎಸ್‍ಆರ್ ಬೆಂಗಳೂರು-ದೇವನಹಳ್ಳಿ ಜೋಡಣೆಯನ್ನು ರಾಜ್ಯ ಸರಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಅನುಮೋದಿಸಿವೆ ಮತ್ತು ಭೂತಾಂತ್ರಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ಕೆಂಗೇರಿ-ವೈಟ್‍ಫೀಲ್ಡ್ ಜೋಡಣೆಯನ್ನು ಇತ್ತೀಚೆಗೆ ಅನುಮೋದಿಸಲಾಗಿದ್ದು, ಶೀಘ್ರದಲ್ಲೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಲಿದೆ. ಮತ್ತು ಉಪನಗರ ರೈಲು ಜಾಲವು ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ ಮತ್ತು ಹೆಬ್ಬಾಳ ಸೇರಿದಂತೆ ಪ್ರಮುಖ ಕೇಂದ್ರಗಳನ್ನು ಸಂಯೋಜಿಸುತ್ತದೆ ಎಂದು ಅವರು ಹೇಳಿದರು.

ಕರ್ನಾಟಕವು ಪ್ರಸಕ್ತ 12 ಜೋಡಿ ವಂದೆ ಭಾರತ್ ರೈಲುಗಳನ್ನು ನಿರ್ವಹಿಸುತ್ತಿದೆ ಎಂದ ಅವರು, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪರೀಕ್ಷೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಮಡಗಾಂವ್ ವರೆಗೆ ಕರಾವಳಿ ಸಂಪರ್ಕವನ್ನು ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನೊಂದಿಗೆ ಹೈದರಾಬಾದ್ ಮತ್ತು ಚೆನ್ನೈ ಅನ್ನು ಸಂಪರ್ಕಿಸುವ ಬುಲೆಟ್ ರೈಲು ಕಾರಿಡಾರ್‍ಗಳನ್ನು ಅನುಮೋದಿಸಲಾಗಿದೆ ಎಂದ ಅಶ್ವಿನಿ ವೈಷ್ಣವ್, ಮುಂಬೈ, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ದೀರ್ಘಾವಧಿಯ ದೃಷ್ಟಿಕೋನದೊಂದಿಗೆ, ಈ ಜಾಲವು 7 ಸಾವಿರ ಕಿ.ಮೀ.ಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಗಮನ ಸೆಳೆದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಹೊಸ ಬೆಂಗಳೂರು-ಮುಂಬೈ ರೈಲನ್ನು ಮಂಜೂರು ಮಾಡಿದ್ದಕ್ಕಾಗಿ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆಗಳು. ಇದು ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ಕರ್ನಾಟಕದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.

ಕರ್ನಾಟಕವು ಪ್ರಸಕ್ತ 14 ಜಿಲ್ಲೆಗಳನ್ನು ಒಳಗೊಂಡಂತೆ 12 ಜೋಡಿ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತಿದೆ. ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡಿಪೋವನ್ನು ಸ್ಥಾಪಿಸಲಾಗುವುದು ಮತ್ತು ಬೆಂಗಳೂರಿನ ಎಸ್‍ಎಂವಿಟಿಯಲ್ಲಿ 52.73 ಕೋಟಿ ರೂ.ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಬೈಯಪ್ಪನಹಳ್ಳಿ–ಹೊಸೂರು (1,116 ಕೋಟಿ ರೂ.), ಬೆಟ್ಟಹಲಸೂರು–ರಾಜಾನುಕುಂಟೆ (248 ಕೋಟಿ ರೂ.) ದ್ವಿಗುಣಗೊಳಿಸುವಿಕೆ ಮತ್ತು ಬೆಂಗಳೂರಿನ ಸುತ್ತಮುತ್ತಲಿನ (1,347 ಕೋಟಿ ರೂ.) ಚತುಷ್ಪಥ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸೋಮಣ್ಣ ಹೇಳಿದರು.

ಯಶವಂತಪುರ, ಕೆಎಸ್‍ಆರ್ ಬೆಂಗಳೂರು, ಲೊಟ್ಟೆಗೊಲ್ಲಹಳ್ಳಿ, ಬೈಯಪ್ಪನಹಳ್ಳಿ, ಪೆನುಕೊಂಡ, ಮೈಸೂರು ಮತ್ತು ಜೋಲಾರಪೇಟೆ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಒಟ್ಟು 6,396 ಕೋಟಿ ರೂ.ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಕಾರ್ಯಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸೋಮಣ್ಣ ಮಾಹಿತಿ ನೀಡಿದರು.

ಕರ್ನಾಟಕವು 7748 ಕೋಟಿ ರೂ.ದಾಖಲೆಯ ರೈಲ್ವೆ ಬಜೆಟ್ ಹಂಚಿಕೆಯನ್ನು ಪಡೆದಿದೆ. 2014 ರಿಂದ, ಸುಮಾರು 3,840 ಕಿ.ಮೀ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು 3,742 ಕಿ.ಮೀ ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ, ಇದು ರಾಜ್ಯವನ್ನು ಶೇ.100ರಷ್ಟು ವಿದ್ಯುದ್ದೀಕರಣಕ್ಕೆ ಹತ್ತಿರ ತಂದಿದೆ ಅವರು ಹೇಳಿದರು.

2014 ಕ್ಕಿಂತ ಮೊದಲು ಸುಮಾರು 150 ಇದ್ದ ಆರ್‌ ಒಬಿಗಳು/ಆರ್‍ಯುಬಿಗಳ ಸಂಖ್ಯೆ ಈಗ 707 ಕ್ಕೆ ಏರಿದೆ, ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಪೂರ್ಣಗೊಳ್ಳಲಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಲೆವೆಲ್ ಕ್ರಾಸಿಂಗ್‍ಗಳನ್ನು ಸ್ಥಗಿತಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಸೋಮಣ್ಣ ನುಡಿದರು.

ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News