×
Ad

ಮನಸ್ಸುಗಳನ್ನು ಬೆಸೆಯುವ ಬಹು ಓದು ಬಳಗದ ‘ಕರಾವಳಿ ಕವನಗಳು’

Update: 2025-12-18 15:10 IST

ಕೃತಿ: ಕರಾವಳಿ ಕವನಗಳು

(2001-2025)

ಪ್ರಧಾನ ಸಂಪಾದಕರು:

ಡಾ. ಉಷಾ ಪ್ರಕಾಶ್

ಡಾ. ರಾಘವೇಂದ್ರ ಜಿಗಳೂರ

ಮುಖಬೆಲೆ: 750 ರೂ.

ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಷನ್ಸ್, ಲೈಟ್‌ಹೌಸ್ ಹಿಲ್ ರಸ್ತೆ, ಮಂಗಳೂರು-575001

ಫೋನ್: 08242972002, 7019225774

‘ಕರಾವಳಿ ಕವನಗಳು’ ಪುಸ್ತಕದ ಪದ್ಯವೊಂದರ ಸಾಲುಗಳಿವು;

‘‘ಸೋತು ಕಂಗಾಲಾದ ಜೀವಕ್ಕೆ ಅಂಬೆಗಾಲಿಡುವ ಪುಟ್ಟಕಂದನ ಜೊತೆ ಬಿಟ್ಟುಬಿಡಿ.

ಎಲ್ಲವನ್ನೂ ಗೆದ್ದೆ ಎಂದು ಬೀಗುವವನಿಗೆ ಸಾವು ನಗುವುದನ್ನು ತಿಳಿಸಿ

ದರ್ಪದಿ ಬಾಳುವ ಮನುಜಗೆ ಬೂದಿಯಾದ ದೇಹವ ನೆನಪಿಸಿ’’

‘ಬಹು ಓದು ಬಳಗ’ ರಾಜ್ಯದ ಕರಾವಳಿಯಲ್ಲಿ ಸಾಹಿತ್ಯ-ಸಂಸ್ಕೃತಿ ಹೆಸರಿನಲ್ಲಿ ಇರುವ ಯುವಕರ ಗುಂಪು. ಹೆಸರೇ ಸೂಚಿಸುವಂತೆ ಕರಾವಳಿ ಪ್ರದೇಶವನ್ನು ತಮ್ಮ ಆಲೋಚನೆಯ ಜಾಗವನ್ನಾಗಿ ಗುರುತಿಸಿಕೊಂಡು ಓದು, ಪುಸ್ತಕ ಪ್ರಕಟಣೆ, ಮಾತುಕತೆಗಳ ಮೂಲಕ ಕರಾವಳಿಯ ಮನಸ್ಸುಗಳನ್ನು ಒಟ್ಟಿಗೆ ತರುವ ಕೆಲಸಗಳನ್ನು ಮಾಡುತ್ತಿದೆ.

ಸಮಾಜದ ಗೊತ್ತುಪಡಿಸಿಕೊಂಡ ಜಾಗದ ಮನಸ್ಸುಗಳನ್ನು ಯಾಕೆ ಒಟ್ಟಿಗೆ ತರಬೇಕು, ಹೇಗೆ ತರಬೇಕು, ಯಾಕೆ ತರಬೇಕು ಎಂದು ಯಾರು ಬೇಕಾದರೂ ಕೇಳಿಕೊಳ್ಳಬಹುದು. ನಾವು ಬದುಕುತ್ತಿರುವ ಕಾಲದ ಗುಣವೋ ರಾಜಕಾರಣದ ನೆಪವೋ, ಬೆಳವಣಿಗೆಯ ಗುರುತೋ, ಜಾತಿಮತಗಳ ಮೇಲು-ಕೀಳಿನ ನಡೆಗಳೋ, ದೇವರು, ಮಸೀದಿ, ಬಸದಿ, ಮಠ, ಚರ್ಚುಗಳ ಧಾರ್ಮಿಕ ಗುಂಪುಗೂಡಿಕೆಯ ದೊಡ್ಡಸ್ತಿಕೆಗಳೋ ನಮ್ಮ ನಡುವೆ ಇವೆ. ಇಂತಹ ಮಿತಿಗಳನ್ನು ಹೊರತುಪಡಿಸಿ ಒಬ್ಬರಿಗೊಬ್ಬರು ಬೆರೆಯುತ್ತ ನಾವು ನಾವಾಗಿಯೂ ಉಳಿಯುವ, ಬೆಳೆಯುವ ದಾರಿಗಳು ಇಲ್ಲವೇ ಅಂತೆಲ್ಲಾ ಪ್ರಶ್ನೆಗಳು ಎದುರಾದಾಗ ಇಂತಹ ಮಾತುಕತೆಯ ಗುಂಪುಗಳು ಸಮಾಜದ ಆರೋಗ್ಯವನ್ನು ಬಯಸಿ ಹುಟ್ಟಿಕೊಳ್ಳುತ್ತವೆ ಅನಿಸುತ್ತದೆ.

ಈಗ ಹೇಳಲು ಹೊರಟದ್ದು ಬಹು ಓದು ಬಳಗ ಪ್ರಕಟಿಸಿರುವ ‘ಕರಾವಳಿ ಕವನಗಳು’ ಪುಸ್ತಕದ ಬಗೆಗೆ. ಇದರಲ್ಲಿ ‘300 ಕವಿಗಳ 300 ಕವಿತೆಗಳು’ ಇವೆ. ಬಹು ಓದು ಬಳಗ ಇವುಗಳನ್ನು ಸಂಗ್ರಹಿದೆ. ಮಂಗಳೂರಿನ ‘ಆಕೃತಿ ಆಶಯ ಪಬ್ಲಿಕೇಶನ್ಸ್’ ಇದನ್ನು ಪ್ರಕಟಿಸಿದೆ. ಇದರಲ್ಲಿ 2001ರಿಂದ 2025ರವರೆಗೆ ಕಾಲು ಶತಮಾನದಲ್ಲಿ ರಚನೆಯಾದ ಕರಾವಳಿಯ ಉಡುಪಿ ಜಿಲ್ಲೆ, ಮಂಗಳೂರು ಜಿಲ್ಲೆ ಮತ್ತು ಕಾಸರಗೋಡಿನ 300 ಕವಿತೆಗಳನ್ನು ಸೇರಿಸಲಾಗಿದೆ.

ಜಾಗತಿಕ ಮಾರುಕಟ್ಟೆ ದೇಶದೇಶದ ಗಡಿಗಳನ್ನು ಮೆಟ್ಟಿರುವಾಗ, ವಿಜ್ಞಾನ-ತಂತ್ರಜ್ಞಾನದ ಡಿಜಿಟಲ್ ಬೆಳವಣಿಗೆಗಳು ನಮ್ಮೆಲ್ಲರನ್ನು ಸುತ್ತುವರಿಯುತ್ತಿರುವಾಗ, ಹೊಸಕಾಲದ ಓದು ಬರೆಹಗಳೆಲ್ಲಾ ಏರುಪೇರಾಗಿ ವಿಶ್ವವಿದ್ಯಾನಿಲಯಗಳೇ ತನ್ನತನವನ್ನು ಕಳೆದುಕೊಳ್ಳುತ್ತಿರುವಾಗ, ಜಗತ್ತಿನ ಬೇರೆಬೇರೆ ಬೆಳವಣಿಗೆಗಳೊಂದಿಗೆ ಹೊಸಹೊಸ ನಂಟುಗಳನ್ನು ಜನ ಬೆಸೆದುಕೊಳ್ಳುತ್ತಿರುವಾಗ, ಕಾಯಿಲೆಯ ನೆಪದಲ್ಲಿ ಕೊರೋನ ಎಂಬ ಮಾಯಕವು ಹೆದರಿಕೆಯ ಮೋಡಿಗೆ ಒಳಗು ಮಾಡಿ ಹೋದಂತಹ ಸಮಯದಲ್ಲಿ, ಹಸಿವು-ಹಣಕಾಸುಗಳಲ್ಲಿ ಬದುಕುಗಳನ್ನೇ ಬದಲಾಯಿಸಿರುವ ಕಾಲದಲ್ಲಿ, ಯುದ್ಧಗಳು, ಸಾವು ನೋವನ್ನು ಒಡ್ಡುತ್ತಿರುವ ಕಾಲದಲ್ಲಿ, ಜನಾಂಗ, ಜಾತಿ, ಧರ್ಮದ ಗುಂಪುಗಳು ಒಂದು ಇನ್ನೊಂದರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಹೊತ್ತಿನಲ್ಲಿ, ಮೊಬೈಲ್‌ಗಳಿಂದ ನಮ್ಮ ನಡೆಗಳೇ ಬದಲಾಯಿಸುತ್ತಿರುವಲ್ಲಿ, ಸಾವಯವ ಅಂತಲೋ, ಸಹಜ ಅಂತಲೋ ಉಣ್ಣುವ, ಉಳಿಯುವ ಆಲೋಚನೆಗಳ ಎಚ್ಚರದ ಹೊತ್ತಿನಲ್ಲಿ, ಅತ್ಯಾಚಾರ, ಅನಾಚಾರ, ಕೊಲೆ ಸುಲಿಗೆ ಮೋಸಗಳ ಎದುರು ಜನರ ಕಣ್ಣು ನಾಲಗೆ ಕಿವಿಗಳ ಮಿಡಿತಗಳೇ ಇಲ್ಲದ ಹೊತ್ತಿನ ಕಳೆದ 25 ವರ್ಷಗಳಲ್ಲಿ ರಚನೆಯಾಗಿರುವ ಕವಿತೆಗಳನ್ನು ಈ ಪುಸ್ತಕ ಒಳಗೊಂಡಿದೆ.

ಎಳೆ ವಯಸ್ಸಿನಿಂದ ಮಾಗಿದ ಮುಪ್ಪಿನ ಮನಸ್ಸುಗಳವರೆಗೆ ಕಹಿ, ಒಗರು, ಸಿಹಿಯಾದಿಯಾಗಿ ಎಲ್ಲಾ ಸವಿಗಳ ಕವಿತೆಗಳು ಇಲ್ಲಿ ತುಂಬಿಕೊಂಡಿವೆ. ಇಲ್ಲಿ ಯಾರೂ ದೊಡ್ಡವರೋ ಸಣ್ಣವರೋ ಆಗಿಲ್ಲದೆ ಕಾಲು ಶತಮಾನದ ಕರಾವಳಿಯ ಒಟ್ಟು ಸಮಾಜವಾಗಿ ಇದ್ದಾರೆ.

ಮಗುವಿನ ಬಗೆಗೆ ಕವಿತೆ ಇರುವಂತೆ ಇಲ್ಲಿ ಮುದಿತನದ ಬಗ್ಗೆಯೂ ಇದೆ. ಸೆರೆಯಲ್ಲಿ ಕೊರಗುವ-ಬಿಡುಗಡೆಗೆ ಹಂಬಲಿಸುವ-ಬಿಡುಗಡೆಯನ್ನು ನಂಬುವ ಬದುಕುಗಳು ಇವೆ. ಮೇಲೆ ಆಕಾಶವಿಲ್ಲದ ನೆಲದಲ್ಲಿ ನಿಲ್ಲಲಾಗದ ಬದುಕುಗಳಿವೆ. ದಿಕ್ಕಿಲ್ಲದ ಜೀವಗಳ ಬವಣೆ ಇದೆ. ಹೂವು ಹಾವು ಹಕ್ಕಿ ಚುಕ್ಕಿ, ಬೇಲಿ ಗುಲಾಬಿ ಚಿಗುರಿನ, ಗೆಳೆಯ, ಗೆಳತಿ, ಗೋಡೆ, ಸಂತೆ, ಸಿಟ್ಟು, ಚಿಂತೆ, ಊರು ಕೇರಿ ಹಾದಿ ಬೀದಿ ದೇಶ ನಾಡು, ಹಳೆಯದು ಹೊಸದು ಪುರಾಣ, ಅವರು ಇವಳು ನಾನು, ಹಕ್ಕು, ಹಾಡು, ಜಾತಿ, ಧರ್ಮ, ದೇವರು, ಚರಿತ್ರೆ, ಪುರಾಣದ ವ್ಯಕ್ತಿಗಳು, ಊರು, ಪರಿಸರ, ನಗರ, ನಗು ನಂಟು ನಾಚಿಕೆ ಕೋರಿಕೆ, ಮಳೆ, ಮಗಳು, ಶಾಲೆ, ಕಳಕೊಂಡದ್ದು ಉಳಕೊಂಡದ್ದು, ಹೀಗೆ ಕವಿತೆಗಳು ಒಟ್ಟಿಗಿದ್ದು ಓದಿಸಿಕೊಳ್ಳುತ್ತವೆ.

ಬದಲಾಗುತ್ತಿರುವ ಕಾಲದ ಕತೆ, ಮನಸ್ಸಿನ ವ್ಯಾಪಾರ, ಬದುಕಿನ ಉತ್ಸಾಹ ಉಲ್ಲಾಸ ಸಂಪ್ರದಾಯದ ಕೊರಗು ಪರಂಪರೆಯ ಬೆರಗು, ಸ್ವತಂತ್ರ ನಡೆಯ ಹಂಬಲ, ನೆನಪು-ಒನಪು ಹೊಗಳಿಕೆ, ಬೇಡಿಕೆ ಚೇಡಿಕೆ, ಒಗ್ಗಟ್ಟು ಇಕ್ಕಟ್ಟು, ಬದುಕುವ ತಂತ್ರ, ಕಾಲ ಚಕ್ರದಲ್ಲಿ ಬದಲಾಗುತ್ತಿರುವ ಕರಾವಳಿಯ ಚಿತ್ರಣ, ಇರುವ ಇಲ್ಲವಾಗುವ ಹಳತು-ಹೊಸತುಗಳ ಗ್ಯಾನ, ನೆಮ್ಮದಿ ಬಾಳ್ವೆಯ ಪಯಣ, ದೈವ ಭಕುತಿ ಜೀವದ ಶಕ್ತಿ, ಮುಟ್ಟು ಮೈಲಿಗೆಗಳ ನಡುವೆ ಇನ್ನೊಂದು ಜೀವಕ್ಕಾಗಿ ದೇಹ ಹದಗೊಳ್ಳುವ ಕಾಂತಿ, ಸಾವಿನಾಚೆಗಿನ ತತ್ವ, ವೇದನೆ ಬೋಧನೆ ಆದೇಶ ಉಪದೇಶ, ಬದುಕುಗಳ ಕೊಳಕನ್ನು ಇಲ್ಲವಾಗಿಸುವ ಕನಸು, ಕಡೆಗಣಿಸಲ್ಪಟ್ಟವರ ಮನಸ್ಸು ಹೀಗೆ ಜೀವನಪ್ರೀತಿಯನ್ನು ಹುಡುಕುವ ಸೂತ್ರದಂತೆ ಕರಾವಳಿಯ ಮನಸ್ಸುಗಳನ್ನು ಕವಿತೆಗಳಲ್ಲಿ ಒಟ್ಟಿಗೆ ತರಲಾಗಿದೆ.

ಇಲ್ಲಿನ ಪದ್ಯಗಳಲ್ಲಿ ಕನ್ನಡ ಕಾವ್ಯರಚನೆಯ ಎಲ್ಲಾ ಬಗೆಯ ಲಯಗಳು ಮಿಡಿಯುತ್ತಿವೆ. ಕವಿತೆಗಳನ್ನು ಒಟ್ಟುಗೂಡಿಸಿಕೊಡುವ ಬಗೆಯಲ್ಲಿಯೇ ಬೇರೆ ಮಾಡಿ ನೋಡುವ ಸಿದ್ಧಾಂತದ ಗೋಡೆಗಳು ಕರಗಿಹೋಗಿವೆ. ಎಲ್ಲರನ್ನೂ ಒಳಗೊಳ್ಳುವ ಬಹು ಓದಿನ ಹೊಸ ದಾರಿಯೊಂದು ತಾನೇ ಹುಟ್ಟು ಪಡೆದಿದೆ ಇಲ್ಲಿ. ‘ಕರಾವಳಿ ಕವಿತೆಗಳು’ ಆ ಪ್ರದೇಶದ ಮನಸ್ಸನ್ನು ಕಟ್ಟುವ ತೆರೆದು ಮುಂದಿಡುವ ಬಗೆಯ ಹೊಸ ಮಾದರಿಯಾಗಿ ಕನ್ನಡ ಓದುಗರ ಮುಂದೆ ಇದೆ.

ಬಹು ಓದು ಬಳಗವು ಈ ದಾರಿಯಲ್ಲಿ ‘ಅವಿಭಜಿತ ದಕ್ಷಿಣ ಕನ್ನಡದ ದಲಿತ ಚಿಂತನೆ’, ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಮತ್ತು ‘ತಾಯಿಬೇರು-ಮಕ್ಕಳ ಏಳ್ಗೆಗಾಗಿ ಜೀವ ತೇದವರ ಕಥನಗಳು’ ಪುಸ್ತಕಗಳನ್ನು ರೂಪಿಸಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕಾವೇರಿ ಸೀಮೆ, ಬಯಲು ಸೀಮೆ, ಮಲೆನಾಡು, ಹೀಗೆ ಕವಿತೆಗಳನ್ನು ಒಟ್ಟುಗೂಡಿಸಲು ಒಂದು ಮಾದರಿಯಂತಿದೆ. ಇಂತಹ ಬಹು ಓದಿನ ಬಳಗಗಳು ನಾಡಿನ ಉದ್ದಗಲಕ್ಕೂ ಹುಟ್ಟಿಕೊಳ್ಳಲಿ, ಕೂಡೊಟ್ಟಿನ ಕೆಲಸಗಳು ಹೆಚ್ಚೆಚ್ಚು ನಡೆಯುವಂತಾಗಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಚಲಪತಿ ಆರ್.

contributor

ಸಂಶೋಧಕರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು

Similar News