ವಚನ ಸಾಹಿತ್ಯದ ಉಳಿವಿಗೆ ಶ್ರಮಿಸಿದ ಫ.ಗು ಹಳಕಟ್ಟಿ: ಎಂ.ಎ ಗಫೂರ್
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಉಡುಪಿ, ಜು.2: ಕಲ್ಯಾಣ ಕ್ರಾಂತಿಯ ನಂತರ ನಶಿಸಿಹೋಗುತ್ತಿದ್ದ ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ಸೇರಿದಂತೆ ಹಲವಾರು ಶರಣರು ರಚಿಸಿದ ಸಾವಿರಾರು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅವುಗಳನ್ನು ಮುದ್ರಿಸುವ ಮೂಲಕ ವಚನ ಸಾಹಿತ್ಯ ಇಂದಿಗೂ ಜನಮಾನಸ ದಲ್ಲಿ ಸ್ಥಿರವಾಗಿ ಉಳಿಯುವಂತೆ ಮಾಡಿದ ಫ.ಗು. ಹಳಕಟ್ಟಿ ಅವರ ಶ್ರಮ ಅವಿರತವಾದುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ -ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ-ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಚನ ಸಾಹಿತ್ಯ ಉಳಿದಾಗ ಸಮಾಜ ಉಳಿಯಲು ಸಾಧ್ಯ. ಶರಣರು ರಚಿಸಿದ ವಚನಗಳು ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಸತಿ ಸಹಗಮನ ಪದ್ಧತಿ, ಅಸ್ಪೃಶ್ಯತೆ, ಜಾತಿಪದ್ಧತಿ ಸೇರಿದಂತೆ ಹಲವು ಮೌಢ್ಯಗಳನ್ನು ಹೋಗಲಾಡಿಸುವುದರೊಂದಿಗೆ ಸ್ತ್ರೀ ಸಮಾನತೆಗೆ ಒತ್ತು ನೀಡಿದ್ದವು. ಸಮಾಜ ಸುಧಾರಣೆಗೆ ದಾರಿಯಾಗಿದ್ದ ಇಂತಹ ವಚನಗಳನ್ನು ಯುವಜನತೆ ಓದಿ, ಅರ್ಥೈಸಿಕೊಳ್ಳುವುದರೊಂದಿಗೆ ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಚನ ಸಾಹಿತ್ಯ ಸಂಗ್ರಹಿಸುವುದು ಸಹಸಮಾಜಕ್ಕೆ ನೀಡುವ ಸೇವೆಯಾಗಿದೆ. ಫ.ಗು ಹಳಕಟ್ಟಿ ಅವರಂಥ ದಾರ್ಶನಿಕರು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾಡಿನ ಜನತೆ ವಚನ ಸಾಹಿತ್ಯದ ಬಗ್ಗೆ ಒಲವು ಹೊಂದಿದೆ.ಸರ್ವಧರ್ಮ ಸಹಿಷ್ಣುತೆಯ ನಾಡಿ ನಲ್ಲಿರುವ ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಬದಿಗಿಟ್ಟು ನಾಡಿನ ಸಂಸ್ಕೃತಿ, ಆಚಾರವಿಚಾರಗಳನ್ನು ಪಾಲಿಸಿ, ಮುಂದಿನ ಪೀಳಿಗೆ ಇದನ್ನು ಮುಂದುವರೆಸಿ ಕೊಂಡು ಹೋಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, 12ನೇ ಶತಮಾನದಲ್ಲಿ ಶಿವಶರಣರಿಂದ ರಚಿತಗೊಂಡು, ಕಲ್ಯಾಣ ಕ್ರಾಂತಿಯ ನಂತರ ಚದುರಿಹೋಗಿದ್ದ ವಚನ ಸಾಹಿತ್ಯಗಳನ್ನು ಫ.ಗು ಹಳಕಟ್ಟಿಯವರು ಅಂದು ರಕ್ಷಿಸದೇ ಹೋಗಿದ್ದರೆ ಇಂದು ಕನ್ನಡ ಸಾಹಿತ್ಯ ಇಷ್ಟು ಶ್ರೀಮಂತವಾಗಿ ಉಳಿಯುತ್ತಿರಲಿಲ್ಲ. ವಕೀಲ ವೃತ್ತಿಯಿಂದ ಬಂದ ಆದಾಯವನ್ನೆಲ್ಲಾ ವಚನ ಸಾಹಿತ್ಯಗಳ ಸಂರಕ್ಷಣೆ, ಪ್ರಚಾರಕ್ಕೆ ಮುಡಿಪಾಗಿಟ್ಟ ಇವರು ಅವುಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರ್ಗಿಕರಿಸದೇ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯ ವಾಗುತ್ತಿರಲಿಲ್ಲ ಎಂದು ಗದ್ಯಾಳ್ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಪವಾಡ ಸದೃಶ್ಯ ಕಾರ್ಯ, ತ್ಯಾಗ, ಸೇವೆಗಳ ಮೂಲಕ ನಾಡಿನ ಚರಿತ್ರೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದ ಫ.ಗು ಹಳಕಟ್ಟಿ ಅವರ 147ನೇ ಜಯಂತಿಯನ್ನು ಇಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಅವರು ಮಾಡಿದ ಸಂಶೋಧನೆ, ಸಂಪಾದನೆ, ಸಾಹಿತ್ಯಿಕ ಕಾರ್ಯ ಗಳಿಂದಾಗಿ ಜನರು ಅವರನ್ನು ವಚನ ಪಿತಾಮಹರೆಂದೇ ಕರೆಯುತ್ತಾರೆ ಎಂದರು.
1904ರಿಂದ 1964ರವರೆಗೆ ನಿರಂತರ 6 ದಶಕಗಳ ಕಾಲ ವಚನ ಸಾಹಿತ್ಯ ಸಂಶೋಧನೆಯೊಂದಿಗೆ ವಕೀಲ ವೃತ್ತಿ, ಧಾರ್ಮಿಕ, ರಾಜಕೀಯ, ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಸಿದ ಫ.ಗು.ಹಳಕಟ್ಟಿ ಅವರ ಕಾರ್ಯ ಶ್ಲಾಘನೀಯ. ಇಂತಹ ಅತ್ಯಮೂಲ್ಯ ವಚನಗಳನ್ನು ಉಳಿಸಿ ಕೊಳ್ಳುವುದು ನಮ್ಮಲ್ಲರ ಕರ್ತವ್ಯ ಎಂದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ.ನಿರಂಜನ್ ಶುಭ ಹಾರೈಸಿ ದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಕನ್ನಡ ಉಪನ್ಯಾಸಕ ರಾಮಾಂಜಿ ಹಾಗೂ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರೆ, ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಂದಿಸಿದರು.