×
Ad

ಡಾ.ಕಾರಂತರು ಸಾರ್ಥಕ ಬದುಕಿಗೆ ಸಾಕ್ಷಿ: ಡಾ.ಗಣನಾಥ ಎಕ್ಕಾರು

Update: 2026-07-02 20:37 IST

ಉಡುಪಿ, ಜು.2: ಬದುಕನ್ನು ರೂಪಿಸಿಕೊಳ್ಳಲು ಪುಸ್ತಕಗಳು ಮಾರ್ಗದರ್ಶಕ. ಇದಕ್ಕಾಗಿ ವಿದ್ಯಾರ್ಥಿಗಳು ಪುಸ್ತಕ ವನ್ನು ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳ್ಳಬೇಕು. ಎಲ್ಲ ವಿಚಾರಗಳ ಕುರಿತು ಜ್ಞಾನ ಹೊಂದಿರು ವುದು ಬದುಕಿನಲ್ಲಿ ಅತೀ ಅವಶ್ಯಕ. ಇದಕ್ಕೆ ಡಾ.ಕೋಟ ಶಿವರಾಮ ಕಾರಂತರೇ ಒಂದು ಉತ್ತಮ ಉದಾಹರಣೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.

ಕುಂದಾಪುರದ ಎಚ್.ಎಂ.ಎಂ ಮತ್ತು ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಮಕ್ಕಳಿಗಾಗಿ ಕಾರಂತರು-5 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಾ.ಕಾರಂತರ ಪರಿಚಯ ಚಿತ್ರಕಲೆಯ ಮೂಲಕ ಕಾರಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಡಾ.ಕಾರಂತರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಿ, ಸಮಾಜಕ್ಕೆ ಅಪಾರವಾದ ಕೊಡುಗೆ ನೀಡುವುದರೊಂದಿಗೆ ಬದುಕಿನ ಮೌಲ್ಯಗಳನ್ನು ತಿಳಿಸಿ ಸಾರ್ಥಕವಾದ ಬದುಕನ್ನು ನಡೆಸಿದರು ಎಂದು ಅವರು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲೆ ಶುಭ ಕೆ.ಎನ್, ಕಾರಂತರು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿತ್ವ. ವಿದ್ಯಾರ್ಥಿಗಳಿಗೆ ಅವರ ಚಿಂತನೆ ಆದರ್ಶಗಳನ್ನು ಚಿತ್ರದ ಮೂಲಕ ಪರಿಚಯಿಸುವುದು ಅರ್ಥಪೂರ್ಣವಾದ ಪ್ರಯತ್ನವಾಗಿದೆ ಎಂದರು.

ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ ಮಾತನಾಡಿ, ಡಾ. ಶಿವರಾಮ ಕಾರಂತರು ಕನ್ನಡ ನಾಡು ಕಂಡ ಅಪರೂಪದ ಬಹುಮುಖ ಪ್ರತಿಭೆ. ಮಕ್ಕಳು ಚಿತ್ರಗಳ ಮೂಲಕ ಕಾರಂತರ ಮೌಲ್ಯಗಳನ್ನು ಅರಿಯುವ ಉತ್ತಮ ಅವಕಾಶ ಇದಾಗಿದೆ. ಕಾರಂತರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಟ್ರಸ್ಟಿನ ಸದಸ್ಯ ಡಾ.ಪ್ರಸಾದ್‌ರಾವ್ ಸ್ವಾಗತಿಸಿದರು. ಡಾ.ಭಾರತಿ ಮರವಂತೆ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಉಪನ್ಯಾಸಕ ಸುರೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News