ಎಸ್ಐಆರ್: ಉಡುಪಿ ಜಿಲ್ಲೆಯಲ್ಲಿ 1,07,614 ಗಣತಿ ನಮೂನೆ ವಿತರಣೆ
ಉಡುಪಿ, ಜು.2: ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆಯು ವ್ಯವಸ್ಥಿತ ವಾಗಿ ನಡೆಯುತ್ತಿದ್ದು, ಮತದಾರರಿಗೆ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್) ಗಳನ್ನು ವಿತರಿಸಲು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.
ಜುಲೈ 2 ಗುರುವಾರದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್ಗಳನ್ನು ಮುದ್ರಿಸಲಾಗಿದ್ದು,ಈವರೆಗೆ 1,07,614 ಫಾರ್ಮ್ಗಳನ್ನು ಮತದಾರರಿಗೆ ವಿತರಿಸಿ, ಶೇ.10.12ರಷ್ಟು ಪ್ರಗತಿ ಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಪ್ರತಿ ಬೂತ್ ಮಟ್ಟದ ಅಧಿಕಾರಿ ಈವರೆಗೆ ಸರಾಸರಿ 97 ಫಾರ್ಮ್ಗಳನ್ನು ವಿತರಿಸಿದ್ದಾರೆ. ಒಟ್ಟು 8703 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಗೊಳಿಸಲಾಗಿದ್ದು, ಇದು ಒಟ್ಟಾರೆಯಾಗಿ ಶೇ.0.82 ಸಾಧನೆಯಾಗಿದೆ. ಒಟ್ಟು 8,167 ಫಾರ್ಮ್ಗಳನ್ನು ಬೂತ್ ಮಟ್ಟದ ಅಧಿಕಾರಿಗಳು ಅಧಿಕೃತವಾಗಿ ಪರಿಶೀಲಿಸಿದ್ದಾರೆ.
ಹೆಚ್ಚುವರಿಯಾಗಿ, 4,354 ಫಾರ್ಮ್ಗಳನ್ನು ‘ಸ್ವಯಂ’ (ಸೆಲ್ಫ್) ಎಂದು ಮತ್ತು 3,789 ಫಾರ್ಮ್ಗಳನ್ನು ‘ವಂಶಸ್ಥರು’ (ಪ್ರೊಗನಿ)ಎಂದು ಮ್ಯಾಪಿಂಗ್ ಮಾಡಲಾಗಿದೆ. 535 ಗಣತಿ ನಮೂನೆಗಳನ್ನು ಮತದಾರರು ನೇರವಾಗಿ ಆನ್ಲೈನ್ ಮೂಲಕ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜು.29ಕ್ಕೆ ಕೊನೆ: ಮನೆ ಮನೆಗೆ ಭೇಟಿ ನೀಡುವ ಎನ್ಯೂಮರೇಶನ್ ಪ್ರಕ್ರಿಯೆ ಮತ್ತು ಡಿಜಿಟಲೀಕರಣವು ಜುಲೈ 29ರಂದು ಪೂರ್ಣಗೊಳ್ಳಲಿದೆ. ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಮನವಿ ಮಾಡಿದೆ.
ಬಿಎಲ್ಓಗಳಿಗೆ ವಿಶೇಷ ಸೌಲಭ್ಯ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಮತ್ತು ಕ್ಷೇತ್ರ ಮಟ್ಟದಲ್ಲಿ ವ್ಯಾಪಕವಾಗಿ ಮನೆ ಮನೆಗೆ ಭೇಟಿ ನೀಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ ಕಲ್ಯಾಣ ಹಾಗೂ ಅನುಕೂಲಕ್ಕಾಗಿ ಸರಕಾರವು ಸಿ.ಆ.ಸು.ಇ (ಇ-ಆಡಳಿತ) ಇಲಾಖೆಯು ‘ಕರ್ತವ್ಯ’ (ಏಚಿಡಿಣಚಿvಥಿ) ಮೊಬೈಲ್ ಆಪ್ಲಿಕೇಶನ್ ಅಡಿಯಲ್ಲಿ ಓಓಡಿ ಸೌಲಭ್ಯವನ್ನು ಒದಗಿಸಿದೆ.
ಕ್ಷೇತ್ರ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇವಲ ಹಾಜರಾತಿ ದಾಖಲಿಸುವ ಉದ್ದೇಶಕ್ಕಾಗಿ ತಮ್ಮ ನಿಯಮಿತ ಕಚೇರಿಗಳಿಗೆ ಭೌತಿಕವಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ‘ಕರ್ತವ್ಯ’ ಆ್ಯಪ್ನಲ್ಲಿ ಲಭ್ಯವಿರುವ ಓಓಡಿ ಆಯ್ಕೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ಸುಲಭವಾಗಿ ದಾಖಲಿಸಬಹುದು. ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶಿಸಿರುವುದಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.