ಹಿರಿಯಡ್ಕ: ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ
ಉಡುಪಿ, ಜು.15: ಅಂತಾರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ 145 ಖೈದಿಗಳಿಗೆ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗ್ತ್ತಿು.
ಈ ಸಂದರ್ಭದಲ್ಲಿ ಖೈದಿಗಳಿಗೆ ಟಿಬಿ, ಎಕ್ಸ-ರೇ, ಐ.ಸಿ.ಟಿ.ಸಿ, ಹೆಪಟೈಟಿಸ್-ಬಿ ಮತ್ತು ಸಿ-ಡ್ರಗ್ ಟೆಸ್ಟ್, ರಕ್ತದೊತ್ತಡ, ಮಧುಮೇಹ, ಸಿಪ್ಲಿಸ್, ಸಾಮಾನ್ಯ ತಪಾಸಣೆ ಮತ್ತು ಉಪಚಾರವನ್ನು ಹಾಗೂ ಮಾದಕ ವಸ್ತುಗಳ ಪತ್ತೆ ಹಚ್ಚುವ ಪರೀಕ್ಷೆಗಳನ್ನು ನಡೆಸಲಾಯಿತು.
ಶಿಬಿರದಲ್ಲಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕ ವಿಜಯಕುಮಾರ ಟಿ.ಚವ್ಹಾಣ್, ಖೈದಿಗಳ ಆರೋಗ್ಯ ತಪಾಸಣೆ ಮತ್ತು ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಶಿಬಿರದ ಪ್ರಯೋಜನ ಪಡೆಯಲು ಹೆಚ್ಚಿನ ಅರಿವು ಮೂಡಿಸ ಬೇಕು. ಖೈದಿಗಳು ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಡಾ.ವಿಶ್ವಾಸ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಡಾ.ಪ್ರಭು ಮತ್ತು ವೈದ್ಯಕೀಯ ತಂಡದವರು ಆರೋಗ್ಯ ತಪಾಸಣೆ ನಡೆಸಿದರು.
ಮಾದಕ ದ್ರವ್ಯ ಪತ್ತೆಹಚ್ಚುವ ತಪಾಸಣೆಯಲ್ಲಿ 145 ಖೈದಿಗಳ ವರದಿಯು ನೆಗೆಟಿವ್ ಬಂದಿದ್ದು ವೈದ್ಯರ ತಂಡವು ಸಂತಸ ವ್ಯಕ್ತಪಡಿಸಿದೆ. ಜಿಲ್ಲಾ ಕಾರಾಗೃಹವನ್ನು ತಂಬಾಕು ಮುಕ್ತ ಕಾರಾಗೃಹ ಎಂದು ಘೋಷಿಸಲು ಮನವಿ ಮಾಡಿದರು.
ಕಾರಾಗೃಹದ ಅಧಿಕಾರಿಗಳಾದ ಡಿ.ಆರ್.ಕೊಣಿ, ಎಸ್.ಎ.ಶಿರೋಳ, ಆರ್.ಎಸ್.ಲಮಾಣ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.