ರಕ್ತದಾನ ಸಮಾಜಕ್ಕೆ ನೀಡುವ ಕೊಡುಗೆ: ಜಿಎಂ ಗಂಗಾಧರ್
ಬ್ರಹ್ಮಾವರ ರುಡ್ಸೆಟ್ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
ಬ್ರಹ್ಮಾವರ, ಜು.20: ಸ್ವಯಂಪ್ರೇರಿತ ರಕ್ತದಾನ ಎಂಬುದು ನಾವು ಸಮಾಜಕ್ಕೆ ನೀಡುವ ಕೊಡುಗೆ. ಹೀಗಾಗಿ ತಾನೂ ಸಹ ಇದುವರೆಗೆ 53 ಬಾರಿ ರಕ್ತದಾನ ಮಾಡಿರುವುದಾಗಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾದ ಗಂಗಾಧರ ಎಚ್.ಕೆ. ತಿಳಿಸಿದ್ದಾರೆ.
ಬ್ರಹ್ಮಾವರದ ರುಡ್ಸೆಟ್ ಸಂಸ್ಥೆಯಲ್ಲಿ ರುಡ್ಸೆಟ್ನ ಆಸರೆ ಸಂಘಟನೆ, ಜಿಲ್ಲಾ ಮೊಗವೀರ ಯುವ ಸಂಘಟನೆಯ ಉಪ್ಪೂರು ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಣಿಪಾಲ ಕೆಎಂಸಿಯ ರಕ್ತನಿಧಿ ಕೇಂದ್ರದ ವತಿಯಿಂದ ಇಂದು ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ ಅವರು ಮಾತನಾಡಿ, ವಿವಿಧ ಸಂಘಟನೆಗಳು ಒಟ್ಟಾಗಿ ರಕ್ತದಾನ ನಡೆಸಲು ಮುಂದೆ ಬರುವ ಮೂಲಕ ರಕ್ತದಾನ ಮಹಾದಾನ ಎಂಬ ಮಾತಿಗೆ ಅರ್ಥ ನೀಡಿದ್ದೀರಿ ಎಂದು ಶುಭಕೋರಿದರು.
ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ. ಮಾತನಾಡಿ, ಪ್ರತಿಯೊಬ್ಬ ಯೋಧನು ದೇಶದ ಗಡಿಯನ್ನು ಕಾಯುವ ಶಕ್ತಿಯಾಗಿದ್ದರೆ, ಪ್ರತಿಯೊಬ್ಬ ರಕ್ತದಾನಿಯು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಯೋಧರಾಗಿ ದ್ದಾರೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-2ರ ಸಹಾಯಕ ಮಹಾಪ್ರಂಬಧಕ ಟಿ.ಎಸ್.ಎನ್ ಪೂರ್ಣಾನಂದ, ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ ಜಿ., ಜಿಲ್ಲಾ ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಉಪ್ಪೂರು ಘಟಕದ ಅಧ್ಯಕ್ಷ ಶರತ್ ಕುಂದರ್, ರುಡ್ಸೆಟ್ ಆಸರೆ ಸಂಘಟನೆಯ ಅಧ್ಯಕ್ಷ ರಾಮಚಂದ್ರ ಆಚಾರ್, ಗೌರವಾಧ್ಯಕ್ಷ ರಾಜೇಶ್ ದೇವಾಡಿಗ, ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದ ಡಾ.ಶಮ್ಮಿ ಶರ್ಮಾ ಉಪಸ್ಥಿತರಿದ್ದರು.
ರುಡ್ಸೆಟ್ ಸಂಸ್ಥೆಯ ಉಪನ್ಯಾಸಕ ಸಂತೋಷ ಶೆಟ್ಟಿ ಸ್ವಾಗತಿಸಿದರೆ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷ ಕೆ.ಸಿ.ಅಮೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರೆ, ಶಾಂತಪ್ಪ ಎನ್. ವಂದಿಸಿದರು.