ಹೊಸತಲೆಮಾರಿನ ಸಮಾಜಮುಖಿ ಜೀವನಕ್ಕೆ ಆಟಿದ ಮಿನದನ ಪ್ರೇರಣೆಯಾಗಲಿ: ಹರಿಪ್ರಸಾದ್ ರೈ

Update: 2026-08-11 18:47 IST

ಉಡುಪಿ, ಆ.11: ತುಳುನಾಡು ಸೌಹಾರ್ದತೆ, ಸಮೃದ್ಧಿ, ಸಂಸ್ಕಾರ ವಂತಿಕೆಯ ಸಂಕೇತ. ಈ ಸತ್ಯವನ್ನು ಯುವ ಜನತೆಗೆ ತಿಳಿಯಪಡಿಸುವ ವಿವಿಧ ಆಯಾಮಗಳಲ್ಲಿ ಆಟಿ ತಿಂಗಳ ಕಾರ್ಯಕ್ರಮವೂ ಒಂದು. ಸಂಘಟನಾ ಪ್ರಜ್ಞೆ, ಆಹಾರ ಕ್ರಮ, ಸಮಾಜದ ರೀತಿ ನೀತಿಗಳನ್ನು ಹೊಸತಲೆಮಾರಿನವರು ಅಳವಡಿಸುವಂತಾಗಲು ಆಟಿದ ಮಿನದನದಂತಹ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಸುಮನಸಾ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ರೈ ಹೇಳಿದ್ದಾರೆ.

ಸುಮನಸಾ ಕೊಡವೂರು ಬಳಗದ ಮಹಿಳಾ ಸದಸ್ಯರು ರಜತ ಸಂಭ್ರಮದ ಸರಣಿ ಕಾರ್ಯಕ್ರಮ ಪ್ರಯುಕ್ತ ಬನ್ನಂಜೆ ಶಿವಗಿರಿ ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಮಿನದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕಿ ಡಾ.ಸುನೀತಾ ವಿ. ಹಾಗೂ ನಿವೃತ್ತ ಪ್ರಾಂಶುಪಾಲೆ ಸುಕನ್ಯ ಮಾರ್ಟಿಸ್ ಆಟಿಕಳೆಂಜನಿಗೆ ಧಾನ್ಯ, ತರಕಾರಿ ಕಾಣಿಕೆಗಳನ್ನು ದಾನ ನೀಡುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು. ನಮ್ಮ ಮೂಲದ ಮತ್ತು ಮೌಲ್ಯದ ಸಂಗತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಆಟಿ ಮಿನದನ ಸಹಕಾರಿಯಾಗುತ್ತದೆ. ಸಾಂಸ್ಕೃತಿಕ ಸಂಘಟನೆ ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯ ಕಾರ್ಯಕ್ರಮ ವನ್ನು ಆಯೋಜಿಸುವುದು ಶ್ಲಾಘನೀಯವೆಂದು ಡಾ.ಸುನೀತಾ ತಿಳಿಸಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ ಆಟಿದ ಪೊಲಬು ನುಡಿಯುತ್ತಾ, ಆಟಿ ಅನಿಷ್ಟವಲ್ಲ, ಅದು ಅನುಭವದ ಅಮೂಲ್ಯ ತಿಂಗಳು. ತುಳುನಾಡಿನ ಪರಂಪರೆಗೆ ಜಾಗತಿಕ ಮನ್ನಣೆಯಿದೆ. ಆದರೊಂದಿಗೆ ಆಧುನಿಕವಾಗಿ ತುಳುಭಾಷೆಯೂ ಸೇರಿದಂತೆ ಇಲ್ಲಿನ ಮಾತೃ ಮೂಲ ಸಂಗತಿಗಳು ಸವಾಲನ್ನೆದುರಿಸುತ್ತಿದೆ. ಈ ಮಣ್ಣಿನ ಶಿಷ್ಟಾಚಾರಗಳನ್ನು ಗೌರವಿಸಿ,ಅದನ್ನು ಅಳವಡಿಸಿಕೊಂಡಲ್ಲಿ ಜೀವನೋದ್ಧರ ಖಂಡಿತಾ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪಾಡ್ದನ ಕಲಾವಿದೆ ಸುಂದರಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ರಜತ ಸಮಿತಿಯ ಗೌರವ ಸಲಹೆಗಾರ ರಂಜನ್ ಕಲ್ಕೂರ್, ಸುಮನಸಾ ಸಂಚಾಲಕ ಭಾಸ್ಕರ ಪಾಲನ್, ಗೌರವಾಧ್ಯಕ್ಷ ಎಂ.ಎಸ್.ಭಟ್ ಉಪಸ್ಥಿತರಿದ್ದರು. ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಪ್ರಜ್ಞಾಶ್ರೀ ಕಾರ್ಯಕ್ರಮ ನಿರೂಪಿಸಿದರು.

ಔಷಧೀಯ ಗುಣವುಳ್ಳ ವಿವಿಧ ಬಗೆಯ ತಿಂಡಿತಿನಿಸು, ಊಟೋಪಚಾರ, ಹಳ್ಳಿ ಆಟಗಳು ಹಾಗೂ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಆಟಿ ಮಿನದನ ಸಂಪನ್ನಗೊಂಡಿತು.

238 ಪಾರಂಪರಿಕ ವಸ್ತುಗಳ ಮನೆ!

ಹಿಂದಿನ ಕಾಲದ ಕೂಡುಕುಟುಂಬದ ಚಿಕ್ಕದಾದ ಚೊಕ್ಕದಾದ ಮನೆಯೇ ದೈವಾರಾಧನೆ ಸೇರಿದಂತೆ ಸಂಸ್ಕಾರ ಯುತ ಬದುಕನ್ನು ಕಟ್ಟಿಕೊಂಡ ನೆಲೆಬೀಡಾಗಿತ್ತು. ಅದನ್ನೆ ನೆನಪಿಸುವಂತಹ ಅಡುಗೆ ಕೋಣೆಯ ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ವೇದಿಕೆಯನ್ನು ರಚಿಸಲಾಗಿತ್ತು.

ಅಂದಿನವರು ಬಳಸಿದ್ದ ವಿವಿಧ ಗಾತ್ರದ ಅಡುಗೆ ಪಾತ್ರೆಗಳು, ಮಣ್ಣಿನ, ಮರದ ವಿವಿಧ ಗಾತ್ರದ ವಸ್ತುಗಳು,ಹಾಗೂ ಇನ್ನಿತರ ಪರಿಕರಗಳಾಗಿ ಒಟ್ಟು 238 ಪಾರಂಪರಿಕ ವಸ್ತುಗಳೊಂದಿಗೆ ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ನೇತೃತ್ವದಲ್ಲಿ ಮಿನದನದ ವೇದಿಕೆ ಸಜ್ಜುಗೊಳಿಸ ಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News