ಉಡುಪಿ, ಆ.27: ಪಶ್ಚಿಮ ಘಟ್ಟದ ಸಂರಕ್ಷಣೆಯ ಹೆಸರಿನಲ್ಲಿ ಕಳೆದ ಒಂದು ದಶಕದಿಂದ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಇದರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ರುವ ಮಲೆಕುಡಿಯ ಹಾಗೂ ಇತರ ಅರಣ್ಯ ಬುಡಕಟ್ಟುಗಳ ಜನಜೀವನಕ್ಕೆ ತೀವ್ರ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ಈ ವಿಷಯದಲ್ಲಿ ಸಭೆ ಕರೆದು ಸಾಧಕ ಬಾಧಕಗಳ ವಿಸೃತ ಚರ್ಚೆ ನಡೆಸಿ ಬಲವಾದ ವಿರೋಧ ನಿರ್ಣಯ ವನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಎಂದು ರಾಜ್ಯ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಗೆ ಸೇರಿರುವ ಜನ ವಸತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿ ಜುಲೈ 27ರಂದು 7ನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆ ಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ಹತ್ತು ಜಿಲ್ಲೆಗಳ 20,668 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದರು.

ಈ ಹಿಂದೆ ಪ್ರಕಟಿಸಿದ ಎಲ್ಲ ಕರಡು ಅಧಿಸೂಚನೆಗೆ ಈ ಪ್ರದೇಶದ ಗ್ರಾಮದ ಜನರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೀಗ ಏಳನೇ ಕರಡು ಅಧಿಸೂಚನೆಯಲ್ಲಿ ಮೊದಲ ಕರಡು ಅಧಿಸೂಚನೆಯಲ್ಲಿದ್ದ ಪ್ರದೇಶವನ್ನು ಮತ್ತೆ ಪರಿಸರ ಸೂಕ್ಷ್ಮಪ್ರದೇಶ ಎಂದು ಗುರುತಿಸಲಾಗಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಯನ್ನು ಮಾಡಲಿಲ್ಲ. ಇದರಿಂದ ಎಂಟು ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ 40 ತಾಲೂಕುಗಳು 1576 ಗ್ರಾಮಗಳ ಸಾವಿರಾರು ಕುಟುಂಬಗಳಲ್ಲಿ ಆತಂಕ ಉಂಟಾಗಿದೆ ಎಂದು ಅವರು ತಿಳಿಸಿದರು.

ಯಥಾಸ್ಥಿತಿ ಯೋಜನೆ ಜಾರಿಯಿಂದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಬದುಕನ್ನು ಕಟ್ಟಿಕೊಂಡು ಬಂದಿರುವ ಕೃಷಿಕರು, ಕೂಲಿಕಾರ್ಮಿಕರು ಸಣ್ಣ ಸಣ್ಣ ವ್ಯಾಪಾರಸ್ಥರ ಬದುಕು ಅತಂತ್ರವಾಗಲಿದ್ದು ಆಕ್ಷೇಪಣೆ ಸಲ್ಲಿಸಲು ಇದೇ ಜುಲೈ 27ರಿಂದ ಮುಂದಿನ 60 ದಿನಗಳ ಕಾಲಾವಕಾಶವಿದ್ದು, ರಾಜ್ಯ ಸರಕಾರಕ್ಕೆ ಇದರಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಆದರೂ ಮುಖ್ಯಮಂತ್ರಿಗಳು ಈ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದಾಗಲಿ, ಸಭೆ ನಡೆಸುವುದಾಗಲೀ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಮಲೆಕುಡಿಯರು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸರಿ ಯಾದ ಭೌತಿಕ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶವನ್ನು ವಿರಹಿತಪಡಿಸಿ ಪರಿಸರದ ಅಭಿವೃದ್ಧಿ ಮಾಡಬೇಕು. ಪಶ್ಚಿಮ ಘಟ್ಟ ಇದೀಗ ನಕ್ಸಲ್ ಮುಕ್ತವಾಗಿದ್ದು, ಮತ್ತೆ ಈ ಜನವಿರೋಧಿ ಯೋಜನೆಗಳನ್ನು ಹೇರುವಿಕೆ ಮಾಡಿದರೆ ನಕ್ಸಲ್ ಚಳುವಳಿ ಸಕ್ರಿಯವಾಗ ಬಹುದು ಎಂಬ ಭಯ ಜನರಲ್ಲಿದೆ. ಹಾಗಾಗಿ ಜನ ಧಂಗೆ ಏಳುವ ಮೊದಲು ಈ ಭಾಗದ ಎಲ್ಲಾ ಶಾಸಕರು. ಸಂಸದರುಗಳು ಎಚ್ಚೆತ್ತು ಜನರ ನೆಮ್ಮದಿಯ ಬದುಕಿಗೆ ಅಡ್ಡಿಯಾಗದಂತೆ ಕಾರ್ಯ ಪ್ರವೃತರಾಗಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ವಸಂತಿ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ, ಪ್ರಮುಖರಾದ ನವೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor