ಕಾರ್ಕಳ: ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಲ್ಲಿ ಐದು ವರ್ಷಗಳ ಯಶಸ್ವಿ ಡಯಾಲಿಸಿಸ್ ಆರೈಕೆ ಸೇವೆಯ ಆಚರಣೆ
ಕಾರ್ಕಳ: ನಗರದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಸಹಯೋಗದಲ್ಲಿ ಐದು ವರ್ಷಗಳ ಯಶಸ್ವಿ ಡಯಾಲಿಸಿಸ್ ಆರೈಕೆ ಸೇವೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ‘5 ವರ್ಷಗಳ ಯಶಸ್ವಿ ಡಯಾಲಿಸಿಸ್ ಆರೈಕೆ: ಅಪ್ಡೇಟ್ ಮತ್ತು ಥ್ಯಾಂಕ್ಸ್ ಗಿವಿಂಗ್’ ಕಾರ್ಯಕ್ರಮ ನಡೆಯಿತು.
ಆಸ್ಪತ್ರೆಯ ಡಯಾಲಿಸಿಸ್ ಘಟಕದ ಬೆಳವಣಿಗೆ, ಗುಣಮಟ್ಟದ ಆರೈಕೆ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಕೈಗೆಟುಕುವ ಮತ್ತು ಸಹಾನುಭೂತಿಯುತ ಡಯಾಲಿಸಿಸ್ ಸೇವೆ ಒದಗಿಸುವಲ್ಲಿ ಆಸ್ಪತ್ರೆಯ ಬದ್ಧತೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಡಯಾಲಿಸಿಸ್ ಘಟಕಕ್ಕೆ ರೋಟರಿ ಕ್ಲಬ್ ಮಣಿಪಾಲದ ‘ರೋಟರಿ ಗ್ಲೋಬಲ್ ಗ್ರಾಂಟ್’ ಮೂಲಕ ಮೂರು ಡಯಾಲಿಸಿಸ್ ಯಂತ್ರಗಳನ್ನು ಪ್ರಾಯೋಜಿಸಲಾಗಿದೆ. ಕಾರ್ಕಳದ ಜಮೀಯತುಲ್ ಫಲಾಹ್ ಹಾಗೂ ಹೆಬ್ರಿಯ ಬೆಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಕೂಡ ಹೆಚ್ಚುವರಿ ಯಂತ್ರಗಳನ್ನು ದೇಣಿಗೆಯಾಗಿ ನೀಡಿವೆ. ಅಜೇಕಾರ್ ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸೇರಿದಂತೆ ವಿವಿಧ ಕುಟುಂಬಗಳು ಹಾಗೂ ಹಿತೈಷಿಗಳ ಸಹಕಾರವನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲಾಯಿತು.
ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಆರ್ಟಿಎನ್. ಡಾ. ಪ್ರದೀಪ್ ಎಸ್. ಮಾತನಾಡಿ, ದೀರ್ಘಕಾಲ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಉತ್ತಮ ಮೂತ್ರಪಿಂಡ ಆರೈಕೆ ಹಾಗೂ ಡಯಾಲಿಸಿಸ್ ಸೌಲಭ್ಯ ಕಲ್ಪಿಸುವಲ್ಲಿ ರೋಟರಿ ಗ್ಲೋಬಲ್ ಗ್ರಾಂಟ್ನ ಸಹಕಾರದ ಕುರಿತು ವಿವರಿಸಿದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲದ ನೆಫ್ರಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ದರ್ಶನ್ ರಂಗಸ್ವಾಮಿ ಮಾತನಾಡಿ, ಡಯಾಲಿಸಿಸ್ ಚಿಕಿತ್ಸೆಯಲ್ಲಿ ಗುಣಮಟ್ಟ, ರೋಗಿಗಳ ಸುರಕ್ಷತೆ ಹಾಗೂ ನಿರಂತರ ಆರೈಕೆಯ ಮಹತ್ವವನ್ನು ವಿವರಿಸಿದರು. ಡಯಾಲಿಸಿಸ್ ಸೇವೆಗೆ ಸಹಕರಿಸಿದ ಆಸ್ಪತ್ರೆಯ ತಂಡ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಕೆ.ಆರ್. ಮಾತನಾಡಿ, ಕಳೆದ ಐದು ವರ್ಷಗಳಿಂದ ರೋಗಿಗಳು ದೂರದ ಪ್ರಯಾಣ ಮಾಡದೆ ಸುರಕ್ಷಿತ ಹಾಗೂ ನಿರಂತರ ಡಯಾಲಿಸಿಸ್ ಸೇವೆ ಪಡೆಯುವಂತೆ ಆಸ್ಪತ್ರೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು. ವಿವಿಧ ದಾನಿಗಳ ಸಹಕಾರದಿಂದ ಹಲವಾರು ರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಡಯಾಲಿಸಿಸ್ ಸೇವೆಯನ್ನು ಬಲಪಡಿಸಲು ಸಹಕರಿಸಿದ ವೈದ್ಯಕೀಯ ಸಿಬ್ಬಂದಿ, ಇತರ ಸಿಬ್ಬಂದಿ, ದಾನಿಗಳು, ಸಂಘ-ಸಂಸ್ಥೆಗಳು, ಕುಟುಂಬಗಳು ಹಾಗೂ ಹಿತೈಷಿಗಳ ಕೊಡುಗೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು.