ಜು.11ರಂದು ಕಲಾರಂಗ ಪ್ರಶಸ್ತಿ ಪ್ರದಾನ, ತಾಳಮದ್ದಲೆ
ಉಡುಪಿ, ಜು.10: ಉಡುಪಿ ಯಕ್ಷಗಾನ ಕಲಾರಂಗವು ಹಿರಿಯ ತಾಳಮದ್ದಲೆ ಅರ್ಥಧಾರಿಗಳಿಗೆ ಕಲಾಸಕ್ತ ಮಟ್ಟಿ ಮುರಳೀಧರ ರಾವ್, ಅರ್ಥಧಾರಿ ಪೆರ್ಲ ಕೃಷ್ಣ ಭಟ್ಟ ಹಾಗೂ ಡಿ.ಬಿ.ವೆಂಕಟಸುಬ್ಬಾ ಜೋಯಿಸ್ರ ಸ್ಮರಣಾರ್ಥ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭ ಜು.11ರ ಶನಿವಾರ ಸಂಜೆ 4:00ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನ ದಲ್ಲಿ ನಡೆಯಲಿದೆ.
ಹಿರಿಯ ಅರ್ಥಧಾರಿಗಳಾದ ಡಾ.ಜಿ.ಕೆ.ಹೆಗಡೆ ಹೊನ್ನಾವರ, ಕೋಟೆ ರಾಮ ಭಟ್ ಕಾರ್ಕಳ ಮತ್ತು ವೆಂಕಟರಾಮ ಭಟ್ಟ ಸುಳ್ಯ ಇವರಿಗೆ ಅನುಕ್ರಮವಾಗಿ ಮಟ್ಟಿ ಮುರಳೀಧರ ರಾವ್, ಪೆರ್ಲ ಕೃಷ್ಣ ಭಟ್ಟ ಹಾಗೂ ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಕಾಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಮಾನವ ಹಕ್ಕುಗಳ ಆಯೋಗ ಸದಸ್ಯರಾದ ಡಾ.ಟಿ.ಶ್ಯಾಮ ಭಟ್ ವಹಿಸಲಿದ್ದಾರೆ. ಪುತ್ತೂರಿನ ವಿಶ್ರಾಂತ ಪ್ರಾಧ್ಯಾಪಕರೂ, ಹಿರಿಯ ವಿದ್ವಾಂಸರೂ ಆದ ಡಾ.ತಾಳ್ತಜೆ ವಸಂತ ಕುಮಾರ್ ಶುಭಾಶಂಸನೆಗೈಯಲಿದ್ದಾರೆ. ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ, ಕುಂಭಾಶಿಯ ಹಿರಿಯ ಸಾಮಾಜಿಕ ಧುರೀಣ ಕೃಷ್ಣಪ್ರಸಾದ ಅಡ್ಯಾಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೊದಲು ಅಪರಾಹ್ನ 1:00ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀರಂಗ ತುಲಾಭಾರ’ ತಾಳಮದ್ದಲೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.