ಪೋಷಕತ್ವ ಯೋಜನೆಯಡಿ ಅರ್ಜಿ ಆಹ್ವಾನ
ಉಡುಪಿ, ಜು.9: ಬಾಲನ್ಯಾಯ ಕಾಯ್ದೆ 2015ರನ್ವಯ ಜಿಲ್ಲೆಯ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದೀರ್ಘಾವಧಿಯಿಂದ ಆಶ್ರಯ ಪಡೆದಿರುವ ಹಾಗೂ ವಿವಿಧ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ 07ರಿಂದ 18 ವರ್ಷದೊಳಗಿನ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವುದು ಪೋಷಕತ್ವ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರತಿಯೊಂದು ಮಗುವಿಗೂ ಕುಟುಂಬ ವಾತಾವರಣದಲ್ಲಿ ಬೆಳೆಯುವ ಹಕ್ಕಿದ್ದು, ವಿವಿಧ ಕಾರಣಗಳಿಂದ ಕೆಲವು ಮಕ್ಕಳನ್ನು ಸರ್ಕಾರಿ, ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಮಗುವಿನ ಸ್ವಂತ ಕುಟುಂಬದಲ್ಲಿ ಇರಿಸಲು ಸಾಧ್ಯವಾಗದಿದ್ದಾಗ ಮಗುವಿನ ಹಿತದೃಷ್ಟಿಯಿಂದ ಅಂತಹ ಮಕ್ಕಳಿಗೆ ಪೋಷಕತ್ವ ಯೋಜನೆಯಡಿಯಲ್ಲಿ ಇತರ ಕುಟುಂಬದಲ್ಲಿ ಬೆಳೆಯಲು ಈ ಯೋಜನೆಯು ಅವಕಾಶ ಕಲ್ಪಿಸುತ್ತದೆ.
ಪೋಷಕತ್ವದ ಅವಧಿ ಅವಕಾಶ ಕಲ್ಪಿಸಿರುವಂತೆ ಮಗುವಿನ ಅಗತ್ಯತೆಯ ಆಧಾರದ ಮೇಲೆ ಅಲ್ಪಾವಧಿಯ ಪೋಷಕತ್ವದಲ್ಲಿ ಅವಧಿಯು 1 ವಷರ್ಕ್ಕಿಂತ ಹೆಚ್ಚಿನ ಅವಧಿಯಾಗಿರಬಾರದು ಅಥವಾ ದೀರ್ಘಾವಧಿಯ ಪೋಷಕ ತ್ವದ ಅವಧಿಯು 1 ವಷರ್ದ ಹೆಚ್ಚಿನ ಅವಧಿಗೆ ಇರಬೇಕು. ಅಲ್ಲದೇ ಕುಟುಂಬದೊಂದಿಗೆ ಮಗುವಿನ ಹೊಂದಾಣಿಕೆಯ ಮೌಲ್ಯಮಾಪನದ ಆಧಾರದ ಮೇಲೆ ಮಗುವಿಗೆ 18 ವಷರ್ ವಯಸ್ಸಾಗುವವರೆಗೆ ಈ ಅವಧಿಯು ನಿಯತಕಾಲಿಕ ವಾಗಿ ವಿಸ್ತರಿಸಬಹುದಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ ಬ್ಲಾಕ್, ಒಂದನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ. 0820-2574964 ಅಥವಾ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ನಿಟ್ಟೂರು, ಉಡುಪಿ ದೂ: 0820-2580220 ಮೊ: 948137220 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.