ಉಡುಪಿ, ಸೆ.5: ನವೆಂಬರ್ 27ಅನ್ನು ‘ಬಾಲವಿವಾಹ, ಬಾಲ್ಯವಿವಾಹ ಹಾಗೂ ಬಲವಂತದ ವಿವಾಹ ನಿರ್ಮೂಲನೆ ಗಾಗಿನ ಅಂತಾರಾಷ್ಟ್ರೀಯ ದಿನ’ವನ್ನಾಗಿ ಘೋಷಿಸುವ ವಿಶ್ವಸಂಸ್ಥೆಯ ನಿರ್ಧಾರವನ್ನು, ಮಂಗಳೂರಿನ ಪಡಿ ಸಂಸ್ಥೆ ಐತಿಹಾಸಿಕ ನಿರ್ಧಾರ ಎಂದು ಸ್ವಾಗತಿಸಿದೆ.

ಬಾಲ್ಯ ವಿವಾಹದ ವಿರುದ್ಧ ಭಾರತದ ಅತಿದೊಡ್ಡ ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳ ಜಾಲವಾದ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್’ (ಜೆಆರ್‌ಸಿ) ನೇತೃತ್ವದ ನಡೆದ ಅಭಿಯಾನಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ದೊರಕಿದೆ ಎಂದು ಜೆಆರ್‌ಸಿಯ ಪಾಲುದಾರನಾಗಿದ್ದು, ಬಾಲವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಶ್ರಮಿಸುತ್ತಿರುವ ಪಡಿ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ವಿರುದ್ಧ ತಳಮಟ್ಟದಲ್ಲಿ ಅಭಿಯಾನವನ್ನು ಮುನ್ನಡೆಸುತ್ತಿ ರುವ ಪಡಿ ಸಂಸ್ಥೆಯು ನವೆಂಬರ್ 27ನ್ನು ಬಾಲ್ಯ ವಿವಾಹ, ಬಾಲ್ಯಾವಸ್ಥೆಯಲ್ಲಿನ ಹಾಗೂ ಬಲವಂತದ ವಿವಾಹಗಳ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನ ಎಂದು ಘೋಷಿಸುವ ವಿಶ್ವಸಂಸ್ಥೆಯ ನಿರ್ಧಾರವನ್ನು ಸ್ವಾಗತಿಸಿದೆ.

ಈ ಘೋಷಣೆಯು ದೇಶಾದ್ಯಂತ ಬಾಲ್ಯ ವಿವಾಹವನ್ನು ತಡೆಗಟ್ಟಲು ಸರಕಾರಗಳು ಮತ್ತು ಆಡಳಿತ ವ್ಯವಸ್ಥೆ ಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಸ್ಟ್ ರೈಟ್ಸ್ ರ್ಫಾ ಚಿಲ್ಡ್ರನ್ ನಡೆಸಿದ ಅಸಾಧಾರಣ ಪ್ರಯತ್ನಗಳಿಗೆ ದೊರೆತ ಜಾಗತಿಕ ಮಾನ್ಯತೆ. ಪಡಿ ಸಂಸ್ಥೆಯು ಹಲವು ವರ್ಷಗಳಿಂದ ಬಾಲ್ಯ ವಿವಾಹದ ವಿರುದ್ಧ ಸಮರ್ಪಿತ ಅಂತಾರಾಷ್ಟ್ರೀಯ ದಿನವನ್ನು ಘೋಷಿಸ ಬೇಕೆಂದು ಜೆಆರ್‌ಸಿಯೊಂದಿಗೆ ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೆನಿ ಡಿಸೋಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಡಿ ಸಂಸ್ಥೆಯ ಅವರಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ರೆನ್ನಿ ಡಿಸೋಜಾ, ಭಾರತದಿಂದ ಮೊಳಗಿದ ಧ್ವನಿ ಇಂದು ಜಾಗತಿಕ ಸಂಕಲ್ಪವಾಗಿ ರೂಪುಗೊಂಡಿದೆ ಎಂದು ಹೇಳಿದರು. ನಮ್ಮ ಪ್ರಯತ್ನಗಳಿಗೆ ಜಾಗತಿಕ ಮಾನ್ಯತೆ ದೊರೆತಿರುವುದು ಅಪಾರ ಹೆಮ್ಮೆಯ ಕ್ಷಣವಾಗಿದೆ. ಬಾಲ್ಯ ವಿವಾಹವನ್ನು ಕೊನೆಗೊಳಿಸಲು ಮೀಸಲಾದ ಜಾಗತಿಕ ದಿನವಾಗಿ ನವೆಂಬರ್ 27 ನ್ನು ವಿಶ್ವಸಂಸ್ಥೆ ಆಯ್ಕೆ ಮಾಡಿರುವುದು ಭಾರತಕ್ಕೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾನೂನು ಕ್ರಮಗಳ ಮೂಲಕ ಪಡಿ ಸಂಸ್ಥೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ನಾಗರಿಕ ಸಂಘಟನೆಗಳ ಸಹಯೋಗದಿಂದ 120 ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor