ಎ.29: ಕುಂದಾಪುರದಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಉಡುಪಿ, ಎ.27: ಭವಿಷ್ಯ ನಿಧಿ ಸದಸ್ಯರ ಮತ್ತು ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಹೊಸದಿಲ್ಲಿ ಪ್ರಧಾನ ಕಚೇರಿ ನಡೆಸುವ ಜಿಲ್ಲಾ ಮಾಸಿಕ ಕಾರ್ಯಕ್ರಮ ‘ನಿಧಿ ಆಪ್ಕೆ ನಿಕಟ್/ಭವಿಷ್ಯನಿಧಿ ನಿಮ್ಮ ಹತ್ತಿರ’ ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ಭಂಡಾರ್ಕಾರ್ಸ್ ಕಲೆ ಮತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಎ.29ರಂದು ನಡೆಯಲಿದೆ.
ನಿಧಿ ಆಪ್ಕೆ ನಿಕಟ್ ಎಂಬುದು ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದೆ. ಇದು ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ಸದಸ್ಯರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿ ಮಯ ವೇದಿಕೆಯಾಗಿ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತದೆ.
ನಿಧಿ ಆಪ್ಕೆ ನಿಕಟ್ ಎಪ್ರಿಲ್ ತಿಂಗಳ ಕಾರ್ಯಕ್ರಮದ ಮುಖ್ಯ ವಿಷಯ ಪಿಂಚಣಿದಾರರ ಸೇವೆಗಳು, ಸದಸ್ಯ ಪಿಂಚಣಿ ಮತ್ತು ಮರಣ ಪಿಂಚಣಿ, ವಿಧವೆ/ವಿಧುರ ಪಿಂಚಣಿ, ಅನಾಥರ ಪಿಂಚಣಿ ಹಾಗೂ ಅಂಗವಿಕಲರ ಪಿಂಚಣಿಯಾಗಿದೆ. ಕಾರ್ಯಕ್ರಮ ದಲ್ಲಿ ಪಿಂಚಣಿ ಸಂಬಂಧಿತ ಸಮಸ್ಯೆಗಳು/ಕುಂದುಕೊರತೆಗಳಿಗಾಗಿ ಪಿಂಚಣಿ ಸಹಾಯ ಕೇಂದ್ರ ಕಾರ್ಯನಿರ್ವಹಿಸುತ್ತದೆ.
ಜಿಲ್ಲೆಯ ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗ ದಾತರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಕ್ಷೇತ್ರೀಯ ಕಾರ್ಯಾಲಯದ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.