36.29 ಲಕ್ಷ ರೂ. ಮೌಲ್ಯದ 73.92 ಕೆಜಿ ಮಾದಕ ವಸ್ತುಗಳು ನಾಶ
ಪಡುಬಿದ್ರಿ : ಉಡುಪಿ ಜಿಲ್ಲೆಯ ನಾನಾ ಪೋಲಿಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಶುಕ್ರವಾರ ಪಡುಬಿದ್ರಿ ಠಾಣಾ ವ್ಯಾಪ್ತಿಯ ನಂದಿಕೂರು ಕೈಗಾರಿಕಾ ಪ್ರಾಂಗಣದಲ್ಲಿ ವೈಜ್ಞಾನಿಕವಾಗಿ ನಾಶಪಡಿಸಲಾಯಿತು.
ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ನ್ಯಾಯಾಲಯದ ಆದೇಶದಂತೆ ಅಂದಾಜು 36,29,550 ರೂ. ಮೊತ್ತದ 73 ಕೆಜಿ 92 ಗ್ರಾಂ 828 ಮಿಲಿಗ್ರಾಂ ತೂಕದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಸದಸ್ಯರಾದ ಕಾರ್ಕಳ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ಮತ್ತು ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ಸೂಕ್ತ ಪರಿಶೀಲನೆ ಬಳಿಕ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಮಲ್ಪೆ ಠಾಣೆಯ ಒಂದೇ ಪ್ರಕರಣದಲ್ಲಿ 32,53,050ರೂ. ಮೌಲ್ಯದ 64.731 ಕೆಜಿ ಗಾಂಜಾ ಸಹಿತ ಮಣಿಪಾಲ ಠಾಣೆಯ 10 ಪ್ರಕರಣ, ಶಿರ್ವ ಠಾಣೆಯ 2 ಪ್ರಕರಣ, ಕೋಟ, ಕಾಪು, ಉಡುಪಿ ನಗರ, ಸೆನ್ ಅಪರಾಧ ಠಾಣೆಗಳ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 18 ಪ್ರಕರಣಗಳಲ್ಲಿ ಮಾದಕ ದ್ರವ್ಯ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ, ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು, ಕಾಪು ಠಾಣಾಧಿಕಾರಿ ತೇಜಸ್ವಿ, ಉಡುಪಿ ಡಿಸಿಆಬಿರ್ ಉಪನಿರೀಕ್ಷಕ ಗೋಪಾಲ ನಾಯ್ಕ್, ನಾನಾ ಠಾಣೆಗಳ ಪೊಲೀಸರು, ಸೋಕೋ ಸಿಬ್ಬಂದಿಗಳು, ಆಯುಷ್ ಎನ್ವಿರೋಟೆಕ್ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.
‘ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸಿ ಯುವ ಜನಾಂಗ ಮಾದಕ ವ್ಯಸನರಾಗುವುದನ್ನು ತಪ್ಪಿಸಲು ಸಹಕರಿಸಬೇಕು. ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. ಈಗಾಗಲೆ ಎಲ್ಲರಿಗೂ ಕ್ಯೂಆರ್ ಕೋಡ್ ಹಂಚಲಾಗಿದೆ. ಸಾರ್ವಜನಿಕರು ಅದಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು’
-ಹರಿರಾಂ ಶಂಕರ್, ಉಡುಪಿ ಎಸ್ಪಿ