ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ
ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯಕ್ಕೆ ಮಟ್ಟು ಭಾಗದ ಶ್ರೀಕೃಷ್ಣ ಭಕ್ತರು ಶನಿವಾರ ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು.
ನಗರದ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು.
ಶ್ರೀಕೃಷ್ಣ ಮಠ ಮತ್ತು ಮಟ್ಟುಗುಳ್ಳಕ್ಕೆ ವಿಶೇಷ ಸಂಬಂಧವಿದೆ. ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜ ದಿಂದ ಹುಟ್ಟಿಕೊಂಡ ಗುಳ್ಳ ಇಂದು ದೇಶದಲ್ಲೇ ಜಿಐ ಪೇಟೆಂಟ್ ಪಡೆದ ಮೊದಲ ತರಕಾರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಕೃಷ್ಣ ಮಠದ ನಿತ್ಯ ಬಳಕೆಯ ತರಕಾರಿಗಳಲ್ಲಿ ಗುಳ್ಳ ತರಕಾರಿಗೆ ವಿಶೇಷ ಸ್ಥಾನವಿದೆ.
ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರು, ಡಾ.ಟಿ.ಎಸ್. ರಾವ್, ಪ್ರದೀಪ್ ರಾವ್, ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಶ್ರೀಕಾಂತ್ ಉಪಾಧ್ಯಾಯ, ಸಂದೀಪ್ ಮಂಜ, ನರೇಶ್ ಪಾಲನ್, ಸದಾನಂದ ಸುವರ್ಣ, ಜಯ ಪೂಜಾರಿ, ಎಂ. ಲಕ್ಷ್ಮಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.