ಅನಾಮಧೇಯ ಪತ್ರ ನೀಡಿದ ಮಾಹಿತಿ: ಗೃಹಬಂಧನದಲ್ಲಿದ್ದ ಪದವೀಧರೆ ಮಾನಸಿಕ ಅಸ್ವಸ್ಥೆಯ ರಕ್ಷಣೆ
ಉಡುಪಿ ಡಿ.18: ಅನಾಮಧೇಯ ಪತ್ರ ನೀಡಿದ ಮಾಹಿತಿಯಂತೆ ಗೃಹ ಬಂಧನದಲ್ಲಿದ್ದ ಮನೋರೋಗಿ ಎಂ.ಕಾಂ. ಪದವೀಧರೆ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿದ್ದಾರೆ.
ಕಾರ್ಕಳ ಮೂಲದ 25ರ ಹರೆಯದ ಯುವತಿ ತೀರಾ ಮಾನಸಿಕ ರೋಗಿಯಾಗಿದ್ದು ಹೆತ್ತವರಿಂದ ನಿಯಂತ್ರಿಸಲು ಅಸಾಧ್ಯವಾದಾಗ ಗೃಹ ಬಂಧನದಲ್ಲಿರಿಸಿದ್ದರು. ಈ ಕುರಿತ ಅನಾಮಧೇಯ ಪತ್ರವೊಂದು ಮಹಿಳಾ ಪರ ಇಲಾಖೆಗೆ ಬಂದಿದ್ದು ಈ ಯುವತಿಯ ಗೃಹ ಬಂಧನ ಮುಕ್ತಿ ಹಾಗೂ ಚಿಕಿತ್ಸೆಯ ಬಗ್ಗೆ ಕಾನೂನು ಕ್ರಮಕ್ಕೆ ಆಗ್ರಹಿಸಿತ್ತು.
ಅನಾಮಧೇಯ ಪತ್ರದ ಮಾಹಿತಿ ಪಡೆದ ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸ್ಥಳಕ್ಕೆ ಧಾವಿಸಿ ಯುವತಿಯ ಪರಿಸ್ಥಿತಿ ಹಾಗೂ ಹೆತ್ತವರ ಅಸಹಾಯಕತೆ ನೋಡಿ ವಿಶೇಷ ಮುತುವರ್ಜಿ ವಹಿಸಿದ್ದು, ಕಾನೂನು ಪ್ರಕ್ರಿಯೆ ನಡೆಸಿ ಸಹಕರಿಸಿದರು. ಸಖಿ ಸೆಂಟರಿನಿಂದ ವಿಶು ಶೆಟ್ಟಿ ಅವರಿಗೆ ಮಾಹಿತಿ ಲಭಿಸಿದ್ದು ರಕ್ಷಣಾ ಕಾರ್ಯ ನಡೆಸಲಾಯಿತು.
ವಿಶು ಶೆಟ್ಟಿಯ ಮನವಿಗೆ ಸ್ಪಂದಿಸಿದ ದೈಗೋಳಿಯ ಸಾಯಿ ನಿಕೇತನ ಆಶ್ರಮದ ಡಾ.ಉದಯ ಕುಮಾರ್ ದಂಪತಿ ಸ್ವತಃ ಕಾರ್ಕಳಕ್ಕೆ ಬಂದು ವಿಶು ಶೆಟ್ಟಿ ಮುಖಾಂತರ ರಕ್ಷಣಾ ಕಾರ್ಯ ನಡೆಸಿ ಆಕೆಯನ್ನು ಚಿಕಿತ್ಸೆ ಹಾಗೂ ಪುನರ್ವಸತಿಗೆ ಕರೆದುಕೊಂಡು ಹೋಗಿ ಸಹಕರಿಸಿದ್ದಾರೆ. ವಿಶು ಶೆಟ್ಟಿ ಆಶ್ರಮಕ್ಕೆ ವೈಯಕ್ತಿಕವಾಗಿ 10,000ರೂ. ಧನ ಸಹಾಯ ನೀಡಿದ್ದಾರೆ.