×
Ad

ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ತಡೆಗೆ 29 ಚೆಕ್ ಪೋಸ್ಟ್ ಗಳ ಸ್ಥಾಪನೆ: ಎಸ್ಪಿ ಹರಿರಾಂ ಶಂಕರ್

'ವಾರದಲ್ಲಿ 11 ವಾಹನಗಳ ವಿರುದ್ಧ ಕ್ರಮ '

Update: 2025-12-14 11:16 IST

ಉಡಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಲ್ಲಿ ಮರಳು, ಕೆಂಪುಕಲ್ಲು, ಶಿಲೆಕಲ್ಲು, ಎಂಸ್ಯಾಂಡ್ ಸಾಗಾಟದ ವಾಹನಗಳನ್ನು ತಪಾಸಣೆ ನಡೆಸಿ, 11 ಅಕ್ರಮ ಸಾಗಾಟದ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

 

ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ತಡೆಯಲು ಒಟ್ಟು 29 ಪೊಲೀಸ್ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ, ಆ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. ಈ ಚೆಕ್ಪೋಸ್ಟ್ ಗಳಲ್ಲಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಸಿಬ್ಬಂದಿಯವರನ್ನು ನೇಮಕ ಮಾಡುತ್ತಿದ್ದು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಚೆಕ್ ಪೋಸ್ಟ್ ಗಳಲ್ಲಿನ ಕರ್ತವ್ಯನಿರತ ಪೊಲೀಸರು, ಮರಳು, ಕೆಂಪು ಕಲ್ಲು, ಶಿಲೆಕಲ್ಲು ಹಾಗೂ ಎಂ. ಸ್ಯಾಂಡ್ ಸಾಗಾಟ ಮಾಡುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಹಾಗೆ ಡಿ.6ರಿಂದ ಸುಮಾರು 3,966 ವಾಹನಗಳನ್ನ ಚೆಕ್ ಮಾಡಲಾಗಿದ್ದು, ಅವುಗಳಲ್ಲಿ ಸುಮಾರು 11 ವಾಹನಗಳಲ್ಲಿ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ, ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡುಬಂದಿದೆ. ಅವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.

 

ಇವುಗಳಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ವಾಹನವನ್ನು ಜಪ್ತಿ ಮಾಡಿ, ವಾಹನದ ಚಾಲಕ ಮತ್ತು ಮಾಲಕರ ವಿರುಧ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ 10 ವಾಹನಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ಉಡುಪಿ ಗಣಿ ಇಲಾಖೆಗೆ ಮುಂದಿನ ಕ್ರಮದ ಬಗ್ಗೆ ವರದಿ ಕಳುಹಿಸಿಕೊಟ್ಟಿದ್ದು, ಗಣಿ ಇಲಾಖೆಯವರು ಈ ವಾಹನಗಳ ಆರ್ ಸಿ ಮಾಲಕರಿಗೆ ಒಟ್ಟು 3,08,710 ರೂ. ದಂಡ ವಿಧಿಸಿದ್ದಾರೆ.

ಮುಂದೆಯೂ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ, ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಸಾಗಾಟ ಮಾಡುತ್ತಿರುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News