ಹೆಜಮಾಡಿ: ನಿಂತ ಲಾರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಪಡುಬಿದ್ರಿ: ಹೆಜಮಾಡಿ ಟೋಲ್ ಪ್ಲಾಜಾದ ಬಳಿ ನಿಲ್ಲಿಸಿದ್ದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಢಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ನಡೆದಿದೆ.
ಗಾಯಗೊಂಡವರನ್ನು ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಎಂದು ಗುರುತಿಸಲಾಗಿದೆ. ಇವರು ಯಾವುದೋ ಕಾರ್ಯಕ್ರಮಕ್ಕೆ ತೆರಳಿ ಬೆಳಗ್ಗಿನ ಜಾವ ವಾಪಾಸಾಗುತ್ತಿದ್ದಾಗ, ಈ ಘಟನೆ ನಡೆದಿದೆ.
ಮರ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯನ್ನು ಹೆಜಮಾಡಿ ಟೋಲ್ ಗೇಟಿನ ಕೆಲವೇ ಮೀಟರ್ ಗಳ ಅಂತರದಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ಗಮನಿಸದ ಕಾರು ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ. ಢಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಸಿಲುಕಿಕೊಂಡಿದ್ದ ವಿರಾಜ್ ರನ್ನು ಹೊರತೆಗೆಯಲು ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ಸುಮಾರು ಒಂದು ಗಂಟೆ ಶ್ರಮಿಸಿದ್ದಾರೆ. ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.