×
Ad

ಕುಂದಾಪುರದಲ್ಲಿ ಹನಿಟ್ರ್ಯಾಪ್ ಪ್ರಕರಣ| ವ್ಯಕ್ತಿಗೆ ಹಲ್ಲೆಗೈದು ಹಣ ಸುಲಿಗೆ ಆರೋಪ: ಮಹಿಳೆ ಸಹಿತ 6 ಮಂದಿ ಸೆರೆ

Update: 2025-09-03 19:39 IST

ಕುಂದಾಪುರ, ಸೆ.2: ಹನಿಟ್ರ್ಯಾಪ್ ಜಾಲವೊಂದನ್ನು ಬೇಧಿಸಿದ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧೀ ಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26), ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಟ್ಟು 18,00,000‌ ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪ್ರಕರಣದ ವಿವರ: ಸಂದೀಪ ಕುಮಾರ್ ಸುಮಾರು ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಸವಾದ್‌ನ ಪರಿಚಯವಾಗಿದ್ದು, ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವದ್, ಆಸ್ಮಾ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟು ಮೊಬೈಲ್ ನಂಬರ್ ಕೊಟ್ಟಿದ್ದನು.

ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿದು ಆಕೆಗೆ ಸಂದೀಪ್ ಕರೆ ಮಾಡಿದ್ದು, ಆಕೆ ಸಂದೀಪ್ ಅವರನ್ನು ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ಅದರಂತೆ ಸಂದೀಪ್ ಸೆ.2ರಂದು ಸಂಜೆ 6:30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿ ಹೋಗಿದ್ದರು. ಅಲ್ಲಿ ಆಸ್ಮಾ, ಸಂದೀಪ್ ಮನೆಗೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ.

ಬಳಿಕ ಆಸ್ಮಾ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿ ಸಂದೀಪ್ ಬಳಿ 3 ಲಕ್ಷ ಹಣ ನೀಡುವಂತೆ ಬೆದರಿಸಿ ದರು. ಅವರಲ್ಲಿ ಮೊಹಮ್ಮದ್ ನಾಸೀರ್ ಶರೀಫ್ ಚಾಕು ತೋರಿಸಿ ಹಣ ಕೊಡುವಂತೆ ಸಂದೀಪ್‌ಗೆ ಹೆದರಿಸಿದ್ದನು ಎಂದು ದೂರಲಾಗಿದೆ.

ಈ ವೇಳೆ ಸಂದೀಪ್ ಅಲ್ಲಿಂದ ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಸವದ್ ಯಾನೆ ಅಚ್ಚು, ಸೈಪುಲ್ಲಾ, ಮೊಹಮ್ಮದ್ ನಾಸೀರ್, ಶರೀಫ್, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಝೀಝ್ ಸೇರಿ ಸಂದೀಪ್ ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದರೆನ್ನಲಾಗಿದೆ. ಸಂದೀಪ್‌ಗೆ ರಾಡ್‌ನಿಂದ ಹೊಡೆದು ಬಳಿಕ ಅವರ ಪ್ಯಾಂಟ್ ಜೇಬಿನಲ್ಲಿದ್ದ 6,200ರೂ.ವನ್ನು ಬಲವಂತದಿಂದ ಕಸಿದುಕೊಂಡರು. ನಂತರ ಆಸ್ಮಾ, ಸಂದೀಪ್‌ಗೆ ಗೂಗಲ್ ಪೇ ಮೂಲಕ ಹಣ ಹಾಕಲು ಒತ್ತಾಯಿಸಿದ್ದು, ಅದರಂತೆ ಪ್ರದೀಪ್ ಗೂಗಲ್ ಪೇ ಮೂಲಕ ಸೈಪುಲ್ಲಾನ ಖಾತೆಗೆ 5000ರೂ. ಹಣ ವರ್ಗಾವಣೆ ಮಾಡಿದ್ದರು.

ಬಳಿಕ ಆರೋಪಿಗಳು ಇನ್ನೂ ಹೆಚ್ಚಿನ ಹಣವನ್ನು ಹಾಕುವಂತೆ ಸಂದೀಪ್‌ಗೆ ಒತ್ತಾಯಿಸಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆ ಮಾಡಿದರು. ಇದಕ್ಕೆ ಹೆದರಿದ ಸಂದೀಪ್, ಸೈಪುಲ್ಲಾನ ಖಾತೆಗೆ 30ಸಾವಿರ ರೂ. ವರ್ಗಾವಣೆ ಮಾಡಿದರು. ನಂತರ ಮತ್ತೆ ಬಲತ್ಕಾರವಾಗಿ ಎಟಿಎಂ ಕಾರ್ಡ್‌ನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದುಕೊಂಡು, ಆಸ್ಮಾಳ ಮನೆಯ ರೂಮಿನಲ್ಲಿ ಕೂಡಿಹಾಕಿ ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ ಮತ್ತು ಅಬ್ದುಲ್ ಸತ್ತಾರ್ ಅಲ್ಲಿಯೇ ಇದ್ದು, ಸಂದೀಪ್ ಅವರ ಬ್ಯಾಂಕ್ ಖಾತೆಯಿಂದ 40000ರೂ. ಹಣ ಡ್ರಾ ಮಾಡಿ ಕೊಂಡು, ಎಟಿಎಂ ಕಾರ್ಡ್ ಮತ್ತು ಹಣವನ್ನು ಇಟ್ಟುಕೊಂಡಿದ್ದಾರೆ. ಸಂದೀಪ್ ಅವರನ್ನು ರಾತ್ರಿ 11:30ರ ಸುಮಾರಿಗೆ ಬೆದರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಂದೀಪ್ ಕುಮಾರ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿತ್ತು. ಈ ಕಾರ್ಯಾಚರಣೆ ಯಲ್ಲಿ ಕುಂದಾಪುರ ಎಸ್ಸೈಗಳಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿ ಗಳಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್, ಭಾಗಿರತಿ ನಾಗಶ್ರೀ ಮತ್ತು ರೇವತಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News