×
Ad

"ರಾಜ್ಯದ ಶೇ. 65ರಷ್ಟು ಡೀಮ್ಡ್ ಅರಣ್ಯ ಜಂಟಿ ಸಮೀಕ್ಷೆ ಪೂರ್ಣ"

ಕಾರ್ಕಳದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

Update: 2026-05-25 20:11 IST

ಉಡುಪಿ, ಮೇ 25: ರಾಜ್ಯದ ಅರಣ್ಯ ಪ್ರದೇಶದಲ್ಲಿರುವ ಪರಿಭಾವಿತ ಅರಣ್ಯ ಸಮಸ್ಯೆ (ಡೀಮ್ಡ್ ಫಾರೆಸ್ಟ್) ಯ ಪರಿಹಾರಕ್ಕಾಗಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸಮೀಕ್ಷೆ ನಡೆಯುತಿದ್ದು, ಶೇ.60ರಿಂದ 65ರಷ್ಟು ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕಾರ್ಕಳದಲ್ಲಿ ಇಂದು ಕುದುರೆಮುಖ ವನ್ಯಜೀವಿ ಉಪವಿಭಾಗದ ವಲಯ ಅರಣ್ಯಾಧಿಕಾರಿಗಳ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ, ಅರಣ್ಯ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಡೀಮ್ಡ್ ಅರಣ್ಯ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಕ್ಕೆ ಕೊನೆಯ ಅವಕಾಶ ದೊರೆತಿದ್ದು, ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮರು ಮನವಿ ಸಲ್ಲಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಅರಣ್ಯ ಇಲಾಖೆಯ ಅಪರ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಜಂಟಿ ಸಮೀಕ್ಷೆಗೆ ಸರಕಾರ ಆದೇಶ ನೀಡಿದೆ ಎಂದವರು ತಿಳಿಸಿದರು.

2022ರಲ್ಲಿ ಅಂದಿನ ಬಿಜೆಪಿ ಸರಕಾರ ಸರಿಯಾದ ಸಮೀಕ್ಷೆ ನಡೆಸದೇ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಮೂಲಕ ಗಡಿಬಿಡಿಯಲ್ಲಿ ರಾಜ್ಯದಲ್ಲಿ ಒಟ್ಟು 3.30ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ಮುಚ್ಚಳಿಕೆ ಬರೆದುಕೊಟ್ಟು ತಪ್ಪು ಮಾಡಿತ್ತು. ನ್ಯಾಯಾಲಯ ಅದನ್ನು ಸ್ವೀಕರಿಸಿ ಅದನ್ನು ಜಾರಿಗೊಳಿಸಿತ್ತು ಎಂದವರು ತಿಳಿಸಿದರು.

ಇದಾದ ಬಳಿಕ ಜನರಿಂದ ಸತತವಾಗಿ ದೂರುಗಳು ಬರತೊಡಗಿದವು. ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರಕಾರಿ ಕಟ್ಟಡ, ಆಸ್ಪತ್ರೆ, ಅಂಗನವಾಡಿ ಇತ್ಯಾದಿ ಇದ್ದು, ಜನರಿಗೆ ಅಲ್ಲಿ ಹಕ್ಕುಪತ್ರ ಪಡೆಯಲು ಸಮಸ್ಯೆಯಾಗಿದೆ. ಹಾಗೂ ಅಭಿವೃದ್ಧಿ ಕಾರ್ಯಕ್ಕೂ ತೊಂದರೆ ಎದುರಾಗುತ್ತಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಆಗಿರುವ ತಪ್ಪು ಸರಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಚಿವ ಈಶ್ವರ ಬಿ ಖಂಡ್ರೆ ವಿವರಿಸಿದರು.

ಮೊದಲಿಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದಾಗ 9 ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಎಂದು ಗುರುತಿಸ ಲಾಗಿತ್ತು, ನಂತರ 2022ರಲ್ಲಿ ಪ್ರಮಾಣಪತ್ರ ಸಲ್ಲಿಸಿದಾಗ 3 ಲಕ್ಷ 33 ಸಾವಿರ ಹೆಕ್ಟೇರ್ ಜಮೀನು ಎಂದು ಪರಿಷ್ಕರಿಸಲಾಯಿತು. ಆಗ ಸಮರ್ಪಕವಾಗಿ ಸರ್ವೆ ನಡೆಸದೆ, ಖುದ್ದು ಪರಿಶೀಲಿಸದ ಕಾರಣ ಸರ್ಕಾರಿ ಕಟ್ಟಡ, ಶಾಲೆ, ಆಸ್ಪತ್ರೆ, ಪಟ್ಟಾ ಭೂಮಿ ಡೀಮ್ಡ್ ವ್ಯಾಪ್ತಿಯಲ್ಲಿ ಸೇರಿಕೊಂಡಿತ್ತು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದು, ಈ ಲೋಪ ಸರಿಪಡಿಸಬೇಕಾಗಿದೆ ಎಂದರು.

ಪೂರ್ಣಪ್ರಮಾಣದ ಸಮೀಕ್ಷೆ ನಡೆಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿ ಉಚ್ಛ ನ್ಯಾಯಾಲಯಕ್ಕೆ ಸರಕಾರ ಮರು ಪ್ರಸ್ತಾವನೆಯನ್ನು ಸಲ್ಲಿಸ ಲಿದೆ. ಈ ಮೂಲಕ ಡೀಮ್ಡ್ ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲು ನಾವು ನಿರ್ಧರಿಸಿದ್ದೇವೆ. ಜಂಟಿ ಸಮೀಕ್ಷೆಯನ್ನು ಶೀಘ್ರವೇ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದ್ದೇವೆ ಎಂದರು.

ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ರಾಜ್ಯ ಅರಣ್ಯ ಇಲಾಖೆಗೆ ದಂಡ ಮತ್ತು ಇತರ ಶುಲ್ಕವನ್ನು ಪಾವತಿಸಬೇಕಾಗಿದೆ. ಕಂಪೆನಿ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದ್ದು, ಪ್ರಸ್ತುತ ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಿದೆ. ಅರಣ್ಯ ಇಲಾಖೆ ದಂಡ ಪಾವತಿಗೆ ಕೆಐಒಸಿಎಲ್‌ಗೆ ಕಾಲಾವಕಾಶ ನೀಡಿದೆ. ಕಂಪೆನಿಯಿಂದ ದಂಡ ವಸೂಲಾತಿಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಕುದುರೆಮುಖ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ನಡೆಯುವುದಿಲ್ಲ, ಮುಂದೆಯೂ ನಡೆಯುವುದಿಲ್ಲ ಎಂದು ಪರಿಸರ ಸಚಿವರೂ ಆಗಿರುವ ಈಶ್ವರ ಖಂಡ್ರೆ ಸ್ಪಷ್ಟ ಪಡಿಸಿದರು.

ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಸ್ತಾವನೆ ಬಂದಿಲ್ಲ

ಜಗತ್ತಿನ ‘ಹಾಟ್‌ಸ್ಪಾಟ್’ಗಳಲ್ಲಿ ಒಂದಾಗಿರುವ ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟದ ಸಂರಕ್ಷಣೆಗೆ ತಮ್ಮ ಇಲಾಖೆಯ ಸಂಪೂರ್ಣ ಬದ್ಧವಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ಯಾವುದೇ ಪ್ರಸ್ತಾವನೆ ರಾಜ್ಯ ಸರಕಾರದ ಮುಂದೆ ಬಂದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಪಡಿಸಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಥ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಇದು ನಮ್ಮ ಗಮನಕ್ಕೂ ಬಂದಿಲ್ಲ. ಬಂದಾಗ ನಾನು ಖಂಡಿತ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ನುಡಿದರು. ನಮ್ಮ ಸರಕಾರ ಪಶ್ಚಿಮ ಘಟ್ಟದ ರಕ್ಷಣೆ ಹಾಗೂ ಸಂರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಜನತೆೆ ಅಭಿಪ್ರಾಯದಂತೆ ಸ್ಥಳೀಯರ ವಿರೋಧದ ಕಾರಣಕ್ಕಾಗಿ ಅವರಿಗೆ ತೊಂದರೆಯುಂಟುಮಾಡುವ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ನಾವು ಕೇಂದ್ರಕ್ಕೆ ಪ್ರಸ್ತಾವನೆ ಯನ್ನು ಕಳುಹಿಸಿದ್ದೇವೆ ಎಂದರು.

ಶೇ.83ರಷ್ಟು ಪ.ಘಟ್ಟ ಸಂರಕ್ಷಣೆ: ಕಸ್ತೂರಿರಂಗನ್ ವರದಿಯನ್ನು ಹೊರತುಪಡಿಸಿಯೂ ನಾವು ಪಶ್ಚಿಮಘಟ್ಟದ ಸಂರಕ್ಷಣೆಯಲ್ಲಿ ಯಾವುದೇ ಚ್ಯುತಿ ಮಾಡಿಲ್ಲ. ಇಲ್ಲಿ ಮೀಸಲು ಅರಣ್ಯವಿದೆ. ರಾಷ್ಟ್ರೀಯ ಉದ್ಯಾನವನ ವಿದೆ, ರಾಷ್ಟ್ರೀಯ ವನ್ಯಜೀವಿ ವಲಯವಿದೆ. ಒಟ್ಟಾರೆಯಾಗಿ ಶೇ.83ರಷ್ಟು ಪಶ್ಚಿಮ ಘಟ್ಟವನ್ನು ನಾವು ಸಂರಕ್ಷಿಸಿದ್ದೇವೆ ಎಂದು ಖಂಡ್ರೆ ಹೆಮ್ಮೆಯಿಂದ ಹೇಳಿಕೊಂಡರು.

ರಾಜ್ಯದ ಅರಣ್ಯ, ಪರಿಸರ ಸಂರಕ್ಷಣೆ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.ಅದಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಡೆದು ಕೊಂಡಿದ್ದೇವೆ. ಸಾಕಷ್ಟು ಕಡೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿದ್ದೇವೆ. ಮಾನವ- ಪ್ರಾಣಿ ಸಂಘರ್ಷಕ್ಕೆ ತಡೆ ಹಾಕಲು ಬೇಕಾದ ಕ್ರಮ ತೆಗೆದುಕೊಂ ಡಿದ್ದೇವೆ. ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ರಕ್ಷಣೆಗೆ ಆದ್ಯತೆ ನೀಡಿದ್ದೇವೆ. ಪ್ರಾಣಿ, ಪಕ್ಷಿ, ಕೀಟ, ಶೋಲಾ ಕಾಡುಗಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಖಂಡ್ರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News