×
Ad

ಕುಂದಾಪುರ | ಬೃಹತ್ ಶಿಲಾಯುಗದ 2 ನಿಲ್ಸ್‌ಕಲ್‌ಗಳು ಪತ್ತೆ

Update: 2025-11-22 19:29 IST

ಉಡುಪಿ, ನ.22: ಉಡುಪಿಯ ರಾಷ್ಟ್ರೀಯ ಸಂಘಟನೆ ‘ಆದಿಮ ಕಲಾ ಟ್ರಸ್ಟ್’ ಇತ್ತೀಚಿಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಿಲ್ಕೋಡು ಮತ್ತು ಮಾವಿನಕೆರೆಯಲ್ಲಿ ಬೃಹತ್ ಶಿಲಾಯುಗ ಕಾಲದ ಎರಡು ನಿಲ್ಸ್‌ಕಲ್‌ಗಳು ಪತ್ತೆಯಾಗಿವೆ ಎಂದು ಪುರಾತತ್ತ್ವ ಸಂಶೋಧಕ ಮತ್ತು ಆದಿಮ ಕಲಾ ಟ್ರಸ್ಟ್ ನ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ನೇರಳೆಕಟ್ಟೆಯಿಂದ ಆಜ್ರಿಗೆ ಹೋಗುವ ರಾಜ್ಯ ಹೆದ್ದಾರಿಯ ಎಡಬದಿಯ ದೈವದ ಹಾಡಿಯಲ್ಲಿ ಹಿಲ್ಕೋಡಿನ ನಿಲ್ಸ್‌ಕಲ್‌ ಇದೆ. ಸ್ಥಳೀಯವಾಗಿ ಜನರು ಅದನ್ನು ನೀಚ ದೈವ/ಬೊಬ್ಬರ್ಯನ ಕಲ್ಲು ಎಂದು ಕರೆಯುತ್ತಾರೆ. ಮತ್ತೊಂದು ನಿಲ್ಸ್‌ಕಲ್‌ ಇದೇ ತಾಲೂಕಿನ ಕೆಂಚನೂರು ಗ್ರಾಮದ ಮಾವಿನಕೆರೆ ಹಾಡಿಯಲ್ಲಿ ರಸ್ತೆ ಬದಿಯಲ್ಲಿಯೇ ಕಂಡುಬಂದಿದೆ. ಇತ್ತೀಚಿಗೆ ಸ್ಥಳೀಯರು ಈ ನಿಲುವುಗಲ್ಲಿನ ಅರ್ಧಭಾಗಕ್ಕೆ ಒಂದು ಕಟ್ಟೆಯನ್ನು ಕಟ್ಟಿ ಅದನ್ನು ರಕ್ತೇಶ್ವರಿ ಎಂದು ಆರಾಧಿಸುತ್ತಿದ್ದಾರೆ ಎಂದು ಪ್ರೊ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾವಿನಕೆರೆಯ ನಿಲ್ಸ್‌ಕಲ್‌ 112 ಸೆ.ಮೀ. ಎತ್ತರವಿದ್ದು, ಪಶ್ಚಿಮೋತ್ತರದ ಕಡೆ ಸ್ವಲ್ಪ ವಾಲಿದಂತೆ ಮುಖವನ್ನು ನಿರ್ದೇಶಿಸಲಾಗಿದೆ. ಹಿಲ್ಕೋಡಿನ ನಿಲ್ಸ್‌ಕಲ್‌ ಸುಮಾರು 135 ಸೆ.ಮೀ. ಎತ್ತರವಿದೆ. ಹಿಲ್ಕೋಡು ನಿಲ್ಸ್‌ಕಲ್‌ ಕೆಳಗೆ ಪರೀಕ್ಷಾರ್ಥವಾಗಿ ನಡೆಸಿದ ಅಗೆತದಲ್ಲಿ ಕೆಂಪು ಮತ್ತು ಕೆನೆಬಣ್ಣದ ಮಡಕೆ ಅವಶೇಷದ ತುಣುಕುಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ.

ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು, ಅಂತ್ಯ ಸಂಸ್ಕಾರದ ನಂತರ ಸಮಾಧಿಗಳ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿಯೋ ನೆನಪಿನ ಸ್ಮಾರಕಗಳಾಗಿ ಬೃಹತ್ ನಿಲುವುಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಸಾಮಾನ್ಯವಾಗಿ ನಿಲುವುಗಲ್ಲುಗಳು 3 ಅಡಿ ಎತ್ತರದಿಂದ 16, 17 ಅಡಿ ಎತ್ತರದವರೆಗೆ ಇರುವುದು ಕಂಡು ಬರುತ್ತವೆ. ದಕ್ಷಿಣ ಭಾರತದಾದ್ಯಂತ ಕಂಡುಬರುವ ನಿಲುವುಗಲ್ಲುಗಳನ್ನು ರಕ್ಕಸಗಲ್ಲು, ನಿಲ್ಸ್‌ಕಲ್‌, ನಿಂತಿಕಲ್ಲು, ಗರ್ಭಿಣಿಯರ ಕಲ್ಲು, ಬಸುರಿಕಲ್ಲು, ಆನೆಕಲ್ಲು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಚಾರಿತ್ರಿಕ ಮಹತ್ವ :

ಮಾವಿನಕೆರೆ ಮತ್ತು ಹಿಲ್ಕೋಡಿನ ನಿಲ್ಸ್‌ಕಲ್‌ಗಳು ಬೃಹತ್ ಶಿಲಾಯುಗದ ಅಂತ್ಯಕಾಲದ ಅವಶೇಷಗಳಾಗಿವೆ. ಹಿಲ್ಕೋಡಿನ ನಿಲ್ಸ್‌ಕಲ್ಲಿನ ಕೆಳಭಾಗದಲ್ಲಿ ದೊರೆತ ಕೆಂಪು ಮತ್ತು ಕೆನೆಬಣ್ಣದ ಮಡಕೆಯ ಅವಶೇಷಗಳು ಈ ಅಭಿಪ್ರಾಯವನ್ನು ಸಮರ್ಥಿಸುತ್ತವೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಲ್ಸ್‌ಕಲ್‌ ಮತ್ತು ಹೆರಗಲ್ ಸಮೂಹದ ನಿಲುವುಗಲ್ಲುಗಳು ಕಾಲಮಾನದ ದೃಷ್ಟಿಯಿಂದ ಬಹಳ ಪ್ರಾಚೀನವಾಗಿದ್ದು, ಸುಮಾರು ಕ್ರಿ.ಪೂ. 800ರ ಕಾಲದವುಗಳೆಂದು ತರ್ಕಿಸಲಾಗಿದೆ.

ಆದರೆ, ಕುಂದಾಪುರದಲ್ಲಿ ಕಂಡುಬಂದಿರುವ ನಿಲ್ಸ್‌ಕಲ್‌ಗಳು ಕ್ರಿ.ಪೂ. 300 ರಿಂದ ಕ್ರಿ.ಶ.1 ಅಥವಾ 2ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ತುಳುನಾಡಿನ ಸಾಂಸ್ಕೃತಿಕ ಬದುಕಿನ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿರುವ ಬೃಹತ್ ಶಿಲಾಯುಗದ ಅವಶೇಷಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಪ್ರೊ.ಮುರುಗೇಶಿ ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ ತಮಗೆ ಸಹಾಯ ಮಾಡಿದ ವಿಶ್ವನಾಥ್ ಗುಲ್ವಾಡಿ, ಸುಧಾಕರ್ ಶೆಟ್ಟಿ, ಕೃಷಿ ಅಧಿಕಾರಿ ಸಿ.ನಾಗರಾಜ್ ಶೆಟ್ಟಿ, ಮಂಜು ಪೂಜಾರಿ ಹಿಲ್ಕೋಡು, ಆದಿಮ ಕಲಾ ಸಂಶೋಧನಾ ತಂಡದ ಸದಸ್ಯರಾದ ಮುರುಳೀಧರ ಹೆಗಡೆ ಇಡೂರು-ಕುಂಜ್ಞಾಡಿ, ಶ್ರೇಯಸ್ ಬಂಟಕಲ್, ಗೌತಮ್ ಬೆಳ್ಮಣ್ ಇವರಿಗೆ ತಾವು ಅಭಾರಿಯಾಗಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News