Kundapura | ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ; ಲಕ್ಷಾಂತರ ರೂ. ನಷ್ಟ
ಕುಂದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ದಿನಸಿ ಅಂಗಡಿಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಶ್ರೀ ಬ್ರಹ್ಮಸ್ಥಾನ ದೇವಸ್ಥಾನದ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ಇಲ್ಲಿನ ಗುರು ಬ್ರಹ್ಮ ಜನರಲ್ ಸ್ಟೋರ್ ಬೆಂಕಿಗಾಹುತಿಯಾದ ಅಂಗಡಿ. ಜನರಲ್ ಸ್ಟೋರ್ ಮಾಲಕ ಸಂತೋಷ್ ಕಳೆದ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳಿದ ಬಳಿಕ ತಡರಾತ್ರಿ ಬೆಂಕಿ ಅವಫಡ ಸಂಭವಿಸಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ದಿನಸಿ ಸಾಮಗ್ರಿಗಳು, ಫ್ರಿಡ್ಜ್ ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್ ಕಾರಣ?: ಅಂಗಡಿಯಲ್ಲಿದ್ದ ಫ್ರಿಡ್ಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್, ಸಹಾಯಕ ಠಾಣಾಧಿಕಾರಿ ಖ್ವಾಜಾ ಹುಸೇನ್, ಪ್ರಮುಖ ಅಗ್ನಿಶಾಮಕ ಸತೀಶ್ ಶೆಣೈ, ಚಾಲಕ ಬಸವರಾಜ, ಅಗ್ನಿಶಾಮಕರಾದ ಅಭಿಷೇಕ್, ರಿಯಾಝ್ ಪಾಟೀಲ್ ಕಾರ್ಯಾಚರಣೆಯಲ್ಲಿದ್ದರು.