ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಸಾಹಿತ್ಯ ಸಹಕಾರಿ: ಡಾ. ನಿಕೇತನ
ಉಡುಪಿ: ಸಾಹಿತ್ಯ ವೇದಿಕೆ ನಮ್ಮೊಳಗಿನ ಕವಿ, ಲೇಖಕ, ಚಿಂತಕ, ವಿಮರ್ಶಕನನ್ನು ಅರಿಯುವ ಅವಕಾಶ. ಇಂತಹ ವೇದಿಕೆಗಳು ನಮ್ಮ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಬರೆಯುವ ಕೌಶಲ್ಯ ಮತ್ತು ಮಾತಿನ ಮಾದರಿಯನ್ನು ಬೆಳೆಸುತ್ತವೆ. ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಸಾಹಿತ್ಯ ಸಹಕಾರಿಯಾಗುತ್ತದೆ ಎಂದು ಅಜ್ಜರಕಾಡು ಡಾ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಹೇಳಿದ್ದಾರೆ.
ಉಡುಪಿ ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಟಿ.ಮೋಹನ ದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ಅ.೮ರಂದು ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ಎಸ್. ನಾಯಕ್ ಮಾತನಾಡಿ, ಸೃಜನಾತ್ಮಕ ಚಿಂತನೆಗೆ, ಭಾಷಾ ಅಭಿವ್ಯಕ್ತಿಗೆ ಮತ್ತು ಮಾನವೀಯ ಮೌಲ್ಯಗಳ ಅರಿವಿಗೆ ದಾರಿ ತೆಗೆಯುವ ವೇದಿಕೆ. ಸಾಹಿತ್ಯವು ನಮ್ಮ ಮನಸ್ಸಿಗೆ ನವ ಚೈತನ್ಯ ನೀಡುತ್ತದೆ. ಅದು ಬದುಕನ್ನು ಹೇಗೆ ನೋಡುವುದು, ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ಕಲಿಸುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಅನುಪಮ ಎಚ್.ನಾಯ್ಕ್ ಉಪಸ್ಥಿತರಿದರು. ಕಾರ್ಯಕ್ರಮದ ಸಂಯೋಜಕಿ ಕನ್ನಡ ವಿಭಾಗದ ಉಪನ್ಯಾಸಕಿ ದೀಪಿಕಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಅಕ್ಷತಾ ಎಂ.ಜಿ. ವಂದಿಸಿದರು. ದಿಶಾ ರಾವ್ ಕಾರ್ಯಕ್ರಮ ನಿರೂಪಿಸಿದರು.