ಮಲ್ಪೆ| ಮಾದಕ ವಸ್ತು ಮಾರಾಟ ಪ್ರಕರಣ : ಮೂವರ ಬಂಧನ
ಮಲ್ಪೆ, ಸೆ.6: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಸೆ.5ರಂದು ಸಂಜೆ ವೇಳೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿರುವ ಶ್ರೀಬೊಬ್ಬರ್ಯ ದೈವಸ್ಥಾನದ ಬಳಿ ಬಂಧಿಸಿದ್ದಾರೆ.
ಮಂಗಳೂರು ಉರ್ವ ಬೋಳೂರು ನಿವಾಸಿ ಅಚ್ಚುತ ಎನ್. ಯಾನೆ ಕಿರಣ್ ಮೆಂಡನ್(45), ಗುಜ್ಜರಬೆಟ್ಟುವಿನ ಪುನೀತ್ ಯಾನೆ ಪುನೀತ್ ರಾಜ್(24), ಒಡಿಸ್ಸಾ ಮೂಲದ ಪ್ರಸ್ತುತ ಪಡುತೋನ್ಸೆ ನಿವಾಸಿ ಚಂದ್ರಕಾಂತ ಕಟ್ವ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಕೊಳಲಗಿರಿಯ ಕಿಶೋರ ಎಂಬಾತ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಬೈಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಪೊಲೀಸರನ್ನು ಕಂಡು ಓರ್ವ ಆರೋಪಿ ಓಡಿ ಹೋಗಿದ್ದು, ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರೆನ್ನಲಾಗಿದೆ.
ಬಂಧಿತರಿಂದ 3.480ಗ್ರಾಂ ತೂಕದ 3,000ರೂ. ಮೌಲ್ಯದ ಗಾಂಜಾ ಹಾಗೂ 10,000ರೂ. ಮೌಲ್ಯ ಎಂಡಿಎಂಎ ಮತ್ತು ಕೃತ್ಯಕ್ಕೆ ಬಳಸಿದ 1,50,000ರೂ. ಮೌಲ್ಯದ ಬೈಕ್ನ್ನು ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.