ರಾಷ್ಟ್ರೀಯ ಸಬ್ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್: ಮಲ್ಪೆಯ ಮಾನ್ಸಿ ಸುವರ್ಣಗೆ ಕಂಚಿನ ಪದಕ
ಉಸ್ತುವಾರಿ ಸಚಿವೆ, ಶಾಸಕರಿಂದ ಅಭಿನಂದನೆ
ಉಡುಪಿ, ಆ.13: ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆ ಮಲ್ಪೆ ಮೂಲದ ಮಾನ್ಸಿ ಜೆ. ಸುವರ್ಣ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಲ್ಪೆಯಲ್ಲಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಜಗದೀಶ್ ಸುವರ್ಣ ಹಾಗೂ ಮಾಲತಿ ದಂಪತಿ ಪುತ್ರಿ ಮಾನ್ಸಿ ಜೆ. ಸುವರ್ಣ ಅವರು ಸದ್ಯ ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ (ಎಸ್ಎಐ) ಗೋವಾ ಕೇಂದ್ರದಲ್ಲಿ ಬಾಕ್ಸಿಂಗ್ನಲ್ಲಿ ಅಭ್ಯಾಸ ನಡೆಸುತಿದ್ದಾರೆ.
ಮಣಿಪಾಲ ಪ್ರಗತಿನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಮಾನ್ಸಿ, ಬಾಕ್ಸಿಂಗ್ನಲ್ಲೇ ಸಾಧನೆ ಮಾಡುವ ಗುರಿಯೊಂದಿಗೆ ಕಳೆದ ಮೇ ತಿಂಗಳಲ್ಲಷ್ಟೇ ಎಸ್ಎಐ ಗೋವಾಕ್ಕೆ ಸೇರ್ಪಡೆಗೊಂಡಿದ್ದು, ಗೋವಾದ ಸೈಂಟ್ ಮೇರೀಸ್ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತಿದ್ದಾಳೆ.
ಪ್ರಾರಂಭದಲ್ಲಿ ಕರಾಟೆಯಲ್ಲಿ ತೊಡಗಿಸಿಕೊಂಡಿದ್ದ ಮಾನ್ಸಿ ಬಳಿಕ, ಬಾಕ್ಸಿಂಗ್ನಲ್ಲಿ ಆಸಕ್ತಿ ವಹಿಸಿ, ಅಲೆವೂರಿನ ಕೋಚ್ ಶಿವಪ್ರಸಾದ್ ಆಚಾರ್ಯರ ಬಳಿ ಅಭ್ಯಾಸ ಪ್ರಾರಂಭಿಸಿದ್ದಳು. ಈ ವರ್ಷ ಸಾಯಿ ಗೋವಾದಿಂದ ಬಾಕ್ಸಿಂಗ್ ಕುರಿತಂತೆ ಬಂದ ಜಾಹೀರಾತನ್ನು ನೋಡಿ ಅರ್ಜಿ ಸಲ್ಲಿಸಿದ್ದಳು. ವಿವಿಧ ಪರೀಕ್ಷೆಗಳನ್ನು ಗೆದ್ದು ಸಾಯಿಯಲ್ಲಿ ಬಾಕ್ಸಿಂಗ್ ತರಬೇತಿಗೆ ಆಯ್ಕೆಗೊಂಡಿದ್ದಳು. ಹೀಗಾಗಿ ಕೇಂದ್ರೀಯ ವಿದ್ಯಾಲಯ ತೊರೆದು ಗೋವಾದಲ್ಲಿ ಸೈಂಟ್ ಮೇರೀಸ್ ಹೈಸ್ಕೂಲ್ಗೆ ಸೇರ್ಪಡೆಗೊಂಡು ಸಾಯಿಯಲ್ಲಿ ಬಾಕ್ಸಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾಳೆ.
ಉತ್ತರ ಪ್ರದೇಶದ ನೊಯಿಡಾದಲ್ಲಿ ರಾಷ್ಟ್ರೀಯ ಸಬ್ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ತಾಂತ್ರಿಕ ಕಾರಣದಿಂದಾಗಿ ಗೋವಾದ ಬದಲು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ಬಾಲಕಿಯರ ವಿಭಾಗದಲ್ಲಿ ಪ್ರಥಮ ಪ್ರಯತ್ನದಲ್ಲೇ ತನ್ನ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ.
ಮಾನ್ಸಿ ಬಾಕ್ಸಿಂಗ್ನಲ್ಲಿ ಉನ್ನತ ಸಾಧನೆ ಮಾಡುವ ಗುರಿಯೊಂದಿಗೆ ಮುನ್ನಡೆಯುತಿದ್ದಾಳೆ ಎಂದು ಬಾಕ್ಸಿಂಗ್ನಲ್ಲಿ ಆಕೆಯ ಆರಂಭಿಕ ಕೋಚ್ ಆಗಿದ್ದ ಶಿವಪ್ರಸಾದ್ ಆಚಾರ್ಯ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರ ಅಭಿನಂದನೆ: ಉಡುಪಿ ಜಿಲ್ಲೆಯ ಮಾನ್ಸಿ ಜೆ ಸುವರ್ಣ ಅವರ ಸಾಧನೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶ್ಲಾಘಿಸಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ಮಲ್ಪೆಯ ಮಾಲತಿ ಹಾಗೂ ಜಗದೀಶ್ ಸುವರ್ಣ ದಂಪತಿ ಪುತ್ರಿ ಮಾನ್ಸಿ ಗೆದ್ದಿರುವ ಕಂಚಿನ ಪದಕ ರಾಜ್ಯದ ಇತರ ಬಾಕ್ಸರ್ಗಳಿಗೆ ಸ್ಫೂರ್ತಿಯಾಗಿದೆ ಎಂದವರು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಬಾಕ್ಸಿಂಗ್ ಕ್ರೀಡೆ ವಿರಳ. ಈ ಕ್ರೀಡೆ ಮತ್ತಷ್ಟು ಬೆಳೆಯಲಿ. ಕರಾವಳಿಯ ಮಕ್ಕಳು ಬಾಕ್ಸಿಂಗ್ ನಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಸಚಿವರು ಹಾರೈಸಿದ್ದಾರೆ.
ಮಾನ್ಸಿ ಸುವರ್ಣ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಜಯಿಸಲಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲಿ. ಆಕೆಯ ಸಾಧನೆಗೆ ನಮ್ಮ ಸರಕಾರ ಸದಾ ಬೆನ್ನೆಲುಬು ಆಗಿ ನಿಲ್ಲಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಯಶ್ಪಾಲ್ ಸುವರ್ಣ ಅಭಿನಂದನೆ: ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ನ ಕಂಚಿನ ಪದಕ ವಿಜೇತೆ ಮಾನ್ಸಿ ಜೆ. ಸುವರ್ಣರನ್ನು ಶಾಸಕ ಯಶ್ಪಾಲ್ ಸುವರ್ಣ ಅಭಿನಂದಿಸಿದ್ದಾರೆ. ಈ ಮೂಲಕ ಅವರು ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆ ರಾಜ್ಯದ ಇತರ ಬಾಕ್ಸರ್ಗಳಿಗೆ ಪ್ರೇರಣೆ ನೀಡಲಿ. ಮುಂಬರುವ ದಿನಗಳಲ್ಲಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಗೌರವ ತರುವಂತಾಗಲಿ ಶುಭ ಹಾರೈಸಿದ್ದಾರೆ.