ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಿರೋಧವಿಲ್ಲ: ಗೋಪಾಲ ಪೂಜಾರಿ
ಕುಂದಾಪುರ, ಜ.23: ಸಿದ್ದಾಪುರ ಏತ ನೀರಾವರಿ ಯೋಜನೆಗೆ ನನ್ನ ವಿರೋಧವಿಲ್ಲ ಎಂಬುದು ಈ ಹಿಂದೆ ಸ್ಪಷ್ಟಪಡಿ ಸಲಾಗಿದೆ. ವಾರಾಹಿ ಯೋಜನೆ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ಕಾಮಗಾರಿ ನಡೆದರೆ ವಾರಾಹಿ ನದಿಪಾತ್ರದ ಜನರಿಗೆ ನೀರಿಲ್ಲದಾಗುತ್ತದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ ಎಲ್ಲರಿಗೂ ನೀರು ಸಿಗಬೇಕೆನ್ನುವುದೇ ಕಳಕಳಿ. ಸ್ಥಳಿಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುಗಿಸಲು ಬಿಜೆಪಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ.
ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು, ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬೈಂದೂರು ಶಾಸಕರು ಮಾಡಿದ ಆರೋಪಗಳಿಗೆ ಉತ್ತರ ನೀಡಿದರು. ಹಲವಾರು ಅಣೆಕಟ್ಟು ತಂದು ಹಾಕಿದ್ದೇನೆ ಎಂದು ಶಾಸಕರು ಹೇಳಿದ್ದು, ಅದು ಯಾವುದು ಎಂದು ಅವರೇ ಪಟ್ಟಿಕೊಡಬೇಕು. ತಾನು ಶಾಸಕನಾಗಿದ್ದಾಗ ಸುಬ್ಬರಾಡಿ, ರಾಜಾಡಿ, ಆಜ್ರಿ, ಹೆಮ್ಮಾಡಿಕಟ್ಟು, ಶಾರದಾಪುರ, ಬಿಜೂರು ಅಣೆಕಟ್ಟಿಗೆ ಅನುದಾನ ಮಂಜೂರಾಗಿದ್ದು ಸೌಕೂರು ಏತನೀರಾವರಿ ಡಿಪಿಆರ್ ಆಗಿತ್ತು. ಈಗಿನ ಶಾಸಕರು ಮಾಡಿದ್ದು ಯಾವುದು ಎಂದು ಹೇಳಲಿ ಎಂದು ಸವಾಲು ಹಾಕಿದರು.
ಈಗ ಸಿದ್ದಾಪುರದ ಶೇ.70 ಭಾಗಕ್ಕೆ ವಾರಾಹಿ ನೀರಿಲ್ಲ. ಬಲದಂಡೆ ಯೋಜನೆ, ಶಂಕರನಾರಾಯಣ, ಅಂಪಾರು ಭಾಗದ ನೀರಿಗೂ ಸಮಸ್ಯೆ ಆಗುತ್ತದೆ. ಹೊಳೆಶಂಕರನಾರಾಯಣ ದೇವಸ್ಥಾನ ಸಹಿತ ಅಣೆಕಟ್ಟಿನ ಕೆಳಭಾಗದ ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ 2023ರಲ್ಲಿ ನೀಡಿದ್ದ ಪತ್ರವನ್ನು 2025ರಲ್ಲಿ ನೆನಪಿಸಿದ್ದೆ. ಅದಕ್ಕಾಗಿ ತಜ್ಞರ ಸಮಿತಿ ನೇಮಿಸಿದ್ದು ಅದರಲ್ಲಿ ಸುರತ್ಕಲ್ ಎನ್ಐಟಿಕೆಯವರನ್ನೂ ಸೇರಿಸಬೇಕು ಎನ್ನುವ ಒತ್ತಾಯವು ನನ್ನದಿದೆ ಎಂದರು.
ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ವಾರಾಹಿ ಮೂಲಯೋಜನೆಯಂತೆ 38 ಸಾವಿರ ಎಕರೆಗೆ ನೀರು ಹೋಗ ಬೇಕು. ಈಗ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ನಡೆದರೆ ಮೂಲಯೋಜನೆಯಂತೆ ನೀರು ಸಿಗುವುದಿಲ್ಲ. ಈಗ ಅಣೆಕಟ್ಟಿಗೆ ಅಪಾಯ ಆಗುವಂತೆ ಕಲ್ಲು ಸ್ಫೋಟ ನಡೆಯುತ್ತಿದೆ. ಸೌಕೂರು ಏತ ನೀರಾವರಿಯಿಂದ 8 ಗ್ರಾಮಗಳಿಗೆ ನೀರು ಹೋಗುತ್ತದೆ. ಈಗ ಆದ ವಾರಾಹಿ ಕಾಮಗಾರಿಯಿಂದ ಕೋಟೇಶ್ವರ ವರೆಗೆ ನೀರು ಹೋಗುತ್ತದೆ ಎಂದು ತಿಳಿಸಿದರು.
ವಾರಾಹಿ ಮೂಲಯೋಜನೆಯಂತೆ ಎಲ್ಲರಿಗೂ ನೀರು ಕೊಡಿ ಎನ್ನುವ ಸಲುವಾಗಿ ಜ.25ರಂದು ಕಂಡ್ಲೂರಿನಲ್ಲಿ ಬೆಳಗ್ಗೆ ವಾರಾಹಿ ನದಿ ನೀರು ಬಳಕೆದಾರರ ಜನಾಂದೋಲನ ಸಭೆ ಆಯೋಜಿಸಲಾಗಿದೆ. ಹೋರಿಯಬ್ಬೆ ಡ್ಯಾಂನ ಕೆಳ ಭಾಗದ ಮಚ್ಚಟ್ಟು, ಅಮಾಸೆಬೈಲು, ರಟ್ಟಾಡಿ, ಹಾಲಾಡಿ, 76 ಹಾಲಾಡಿ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಜಪ್ತಿ, ಬಳ್ಕೂರು, ಬಸ್ರೂರು, ಹಟ್ಟಿಕುದ್ರು, ಆನಗಳ್ಳಿ, ಗುಲ್ವಾಡಿ, ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಹಳ್ನಾಡು, ಕಾವ್ರಾಡಿಯ ರೈತರಿಗೆ ಸಮಸ್ಯೆ ಆಗಲಿದೆ. ಸಿದ್ದಾಪುರಕ್ಕೆ ಏತ ನೀರಾವರಿ ಬೇಕು ಎನ್ನುವುದು ನಮ್ಮ ಆಗ್ರಹ ಎಂದರು.
ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಬೈಂದೂರು, ವಿಜಯ ಪುತ್ರನ್, ಸುದೇಶ್ ಶೆಟ್ಟಿ ಗುಲ್ವಾಡಿ, ಶ್ರೀನಿವಾಸ ಸೌಡ, ಅಕ್ಷಯ್ ಶೆಟ್ಟಿ, ಯೋಗೇಶ್ ಪೂಜಾರಿ ಕೋಡಿ ಮೊದಲಾದವರು ಉಪಸ್ಥಿತರಿದ್ದರು.