×
Ad

ನ.18 : ಕಟೀಲಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

Update: 2023-11-15 20:52 IST

ಉಡುಪಿ, ನ.15: ಯಕ್ಷಗಾನ ಕಲಾರಂಗದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನ.18ರ ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಸಂಜೆ 5:00 ಗಂಟೆಗೆ ಜರಗಲಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿ ರುವರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿರುವರು. ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಕೆ.ವಾಸುದೇವ ಆಸ್ರಣ್ಣರು ಕಲಾವಿದರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿ ರುವರು ಎಂದು ಯಕ್ಷಗಾನ ಕಲಾರಂಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಟೀಲು ದೇವಳದ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಕೆ. ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೆಂಗಳೂರಿನ ಕೆ. ಸದಾಶಿವ ಭಟ್, ದುಬೈಯ ಪ್ರಭಾಕರ ಸುವರ್ಣ, ಕೆ.ಎಂ.ಭಟ್ ಕಡತೋಕಾ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಬಿ. ಕರ್ಕೇರಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಮಾರಂಭದಲ್ಲಿ ಕರಾವಳಿಯ 21 ಮಂದಿ ಹಿರಿಯ ಯಕ್ಷಗಾನ ಕಲಾವಿದರಿಗೆ ತಲಾ 20,000 ರೂ. ನಗದು ಪುರಸ್ಕಾರದ ವಿವಿಧ ಪ್ರಶಸ್ತಿ, 50,000ರೂ. ಮೊತ್ತದ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯನ್ನು ಸೋಂದಾ ಶ್ರೀ ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾ ಸಂಸ್ಥೆಗೆ ಹಾಗೂ ಯಕ್ಷಚೇತನ ಪ್ರಶಸ್ತಿ ಯನ್ನು ಹಿರಿಯ ಕಾರ್ಯಕರ್ತ ವಿಜಯಕುಮಾರ್ ಮುದ್ರಾಡಿ ಇವರಿಗೆ ಪ್ರದಾನ ಮಾಡಲಾಗುವುದು.

ಸಮಾರಂಭದ ಪೂರ್ವದಲ್ಲಿ ಅಪರಾಹ್ನ 3:00ರಿಂದ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಯಕ್ಷಕಿಶೋರರಿಂದ ಯಕ್ಷಗಾನ ‘ಶಶಿಪ್ರಭಾ ಪರಿಣಯ’ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಬಳಿಕ ರಾತ್ರಿ 7:00ರಿಂದ ತೆಂಕು- ಬಡಗು- ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಯಕ್ಷಗಾನ-ರಾಗ ಸಂಯೋಗ ಜರಗಲಿದೆ. ರಾತ್ರಿ 8:00ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ ರಿಂದ ಯಕ್ಷಗಾನ ರೂಪಕ ‘ಮನೋಹರ ಸ್ವಾಮಿ ಪರಾಕು’ ಪ್ರಸ್ತುತಗೊಳ್ಳಲಿದೆ ಎಂದು ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News