ಸನ್ಮತಿ ಮಂಥನ -ಜ್ಞಾನ ಪ್ರಸಾರಣ ವಿಶೇಷ ಕಾರ್ಯಕ್ರಮ
ಉಡುಪಿ, ಅ.2: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ 154ನೇ ವರ್ಷದ ಸ್ಮರಣಾರ್ಥ ಸನ್ಮತಿ ಮಂಥನ -ಜ್ಞಾನ ಪ್ರಸಾರಣ ವಿಶೇಷ ಕಾರ್ಯಕ್ರಮವನ್ನು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಗಾಂಧೀಜಿ 1934ರ ಫೆ.25ರಂದು ದ.ಕ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಬಳಸಿದ ಚರಕದ ರಾಟೆಗೆ ಖಾದಿ ನೂಲಿನ ಹಾರ ಹಾಕಿ, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಲಾಯಿತು. ಕಾರ್ಯಕ್ರಮದಲ್ಲಿ ಒಪ್ಪಿಕೊ ಪಚ್ಚೆವನಸಿರಿ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ 154 ಮರ ಗಿಡಗಳ ಸಸ್ಯ ಸಂಪದವನ್ನು ವಿತರಿಸಲಾಯಿತು.
ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭ ದಲ್ಲಿ ಬಡಗಬೆಟ್ಟು ಸೊಸೈಟಿಯ ನಿವೃತ್ತ ನೌಕರರಾದ ಜಯಂತ್ ಕೆ. ಹಾಗೂ ರಂಜಿತ್ ಅಮೀನ್ ಅವರನ್ನು ಬೀಳ್ಕೊಡಲಾ ಯಿತು. ಸ್ವಚ್ಛ ಬಾರತ ಅಭಿಯಾನದ ಅಂಗವಾಗಿ ಸೊಸೈಟಿಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಮಾಜ ಸೇವಕ ವಿಶ್ವನಾಥ ಶೆಣೈ, ಸೊಸೈಟಿಯ ಉಪಾಧ್ಯಕ್ಷ ಎಲ್. ಉಮಾನಾಥ, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಶೆಟ್ಟಿ, ಸೊಸೈಟಿ ನಿರ್ದೇಶಕ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೊಸೈಟಿಯ ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಪ್ರವೀಣ್ ಬಲ್ಲಾಳ್ ವಂದಿಸಿದರು.