×
Ad

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣ: ನಾಗೇಶ್ ಅಂಗೀರಸ ಅವರ ಪತ್ರದ ಆಧಾರದಲ್ಲಿ ಕೇಸು ದಾಖಲಿಸಿಕೊಂಡ ಮಾನವಹಕ್ಕು ಆಯೋಗ

Update: 2023-08-18 21:45 IST

 ನಾಗೇಶ್ ಅಂಗೀರಸ

ಉಡುಪಿ, ಆ.18: ಧರ್ಮಸ್ಥಳದ ಸೌಜನ್ಯಾಳ ಅತ್ಯಾಚಾರ ಹಾಗೂ ಹತ್ಯಾ ಪ್ರಕರಣದಲ್ಲಿ ಸೌಜನ್ಯಾಳ ಕುಟುಂಬ ಹಾಗೂ ನಿರಪರಾಧಿಯಾದರೂ ಶಿಕ್ಷೆಗೊಳಗಾಗಿದ್ದ ಸಂತೋಷ್‌ ರಾವ್ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಮುಖಂಡ ನಾಗೇಶ್ ಅಂಗೀರಸ ಬರೆದ ಪತ್ರದ ಆಧಾರದಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಕೇಸು ದಾಖಲಿಸಿಕೊಂಡಿದೆ.

ಸೌಜನ್ಯಾಳ ಪ್ರಕರಣದ ಕುರಿತು ನೀಡಿದ ದೂರಿನ ಕುರಿತಂತೆ ಕೇಸು ನಂ. 2675/10/19/2023ನ್ನು ದಾಖಲಿಸಿಕೊಳ್ಳ ಲಾಗಿದೆ ಎಂದು ಕರ್ನಾಟಕ ಮಾನವ ಹಕ್ಕು ಆಯೋಗ ತನಗೆ ಎಸ್‌ಎಂಎಸ್ ಸಂದೇಶವನ್ನು ಕಳುಹಿಸಿದೆ ಎಂದು ನಾಗೇಶ್ ಅಂಗೀರಸ ಉಡುಪಿಯಲ್ಲಿ ಇಂದು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ನಾಗೇಶ್ ಅಂಗೀರಸ ಅವರು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸೌಜನ್ಯಾಳ ಕುಟುಂಬಕ್ಕೆ ಹಾಗೂ ಇತ್ತೀಚೆಗೆ ಸಿಬಿಐ ನ್ಯಾಯಾಲಯದಿಂದ ನಿರಪರಾಧಿ ಎಂದು ಬಿಡುಗಡೆಗೊಂಡಿರುವ ಸಂತೋಷ ರಾವ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ತಾನು ಹೈಕೋರ್ಟ್‌ನ ಮುಖ್ಯ ನ್ಯಾಯಧೀಶರು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದರು.

ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಪ್ರಕರಣದ ನಿಜಸಂಗತಿಯನ್ನು ಪತ್ತೆ ಹಚ್ಚಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಹಾಗೂ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳು ಸೇರಿದಂತೆ ಅತ್ಯಾಚಾರಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಆಗ್ರಹಿಸಿದ್ದರು.

ಪ್ರಕರಣದಲ್ಲಿ ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಅಪರಾಧಿ ಎಂಬಂತೆ ಬಿಂಬಿಸಿ 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತಾಗಲು ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಇದರಿಂದಾಗಿ ಅಮಾಯಕ ವ್ಯಕ್ತಿಯೊಬ್ಬರ ಜೀವನವೇ ನಾಶವಾಗಿದೆ ಎಂದವರು ದೂರಿದ್ದರು.

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ಅದೇ ರೀತಿ ಅಮಾಯಕ ವ್ಯಕ್ತಿ ಪ್ರಕರಣದಲ್ಲಿ ಸಿಲುಕಿ ಆತನ ಬದುಕನ್ನು ನಾಶ ಮಾಡಿದ ತನಿಖಾಧಿಕಾರಿಗಳಿಗೂ ಶಿಕ್ಷೆಯಾಗ ಬೇಕು ಎಂದು ಕೊಪ್ಪ ತಾಲೂಕು ಹೇರೂರಿನ ನಾಗೇಶ್ ಅಂಗೀರಸ ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯು ಅಗತ್ಯಬಿದ್ದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಲ್ಲಿಸಲು ಸಿದ್ಧವಿದೆ ಎಂದವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News