ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯ ನಿರ್ವಹಿಸಬೇಕು: ಸಿಇಒ ಪ್ರತೀಕ್ ಬಾಯಲ್
ಉಡುಪಿ, ಡಿ.17: ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮುಂದಿನ 2050ರ ವೇಳೆಗೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಜಿಲ್ಲೆಯ ಉದ್ದಿಮೆದಾರರಿಗೆ ಕರೆ ನೀಡಿದ್ದಾರೆ.
ಕಡಿಯಾಳಿಯ ದಿ ಓಷಿಯನ್ ಪರ್ಲ್ ಹೋಟೆಲ್ನಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ರ್ಯಾಂಪ್) ಯೋಜನೆಯಡಿಯಲ್ಲಿ ನಡೆದ ಒಂದು ದಿನದ ಝೆಡ್ ಮತ್ತು ಲೀನ್ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಉತ್ಪನ್ನಗಳ ತಯಾರಿಕೆ ಮತ್ತು ಗುಣಮಟ್ಟ ಪರಿಸರ ಸ್ನೇಹಿಯಾಗಿರಬೇಕು ಹಾಗೂ ಆರೋಗ್ಯದಾಯಕವಾಗಿರುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದವರು ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಕೇವಲ ಆರ್ಥಿಕತೆಯ ಲಾಭಕ್ಕೆ ಒತ್ತು ನೀಡುವ ಜೊತೆಗೆ ಪರಿಸರ ಸ್ನೇಹಿ ಹಾಗೂ ಆರೋಗ್ಯದಾಯಕ ಉತ್ಪನ್ನಗಳ ತಯಾರಿಕೆಗೆ ಮುಂದಾಗಬೇಕು. ಇದರಿಂದ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಕೈಗಾರಿಕೆಗಳು ಸುದೀರ್ಘವಾಗಿ ನಡೆಯುವುದರ ಜೊತೆಗೆ ದೇಶದ ಆರ್ಥಿಕತೆಗೂ ಅದರಿಂದ ಲಾಭವಾಗುತ್ತದೆ ಎಂದೂ ಪ್ರತೀಕ್ ಬಾಯಲ್ ಅಭಿಪ್ರಾಯಪಟ್ಟರು.
ಭಾರತಕ್ಕೆ ಯೂರೋಪಿಯನ್ನರು ವ್ಯಾಪಾರ ಅರಿಸಿ ಬರುವುದಕ್ಕೂ ಮುನ್ನ ದೇಶದಲ್ಲಿ ಸಣ್ಣ ಹಾಗೂ ಗುಡಿ ಕೈಗಾರಿಕೆ ಗಳಿಗೆ ಹೆಚ್ಚಿನ ಆದ್ಯತೆ ಇತ್ತು. ಅವುಗಳಲ್ಲಿ ತಯಾರಿಸುತ್ತಿದ್ದ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿ ದಂತೆ ವಿವಿಧ ಉತ್ಪನ್ನಗಳು ವಿಶ್ವದಲ್ಲೇ ಹೆಚ್ಚಿನ ಬೇಡಿಕೆ ಹೊಂದಿದ್ದವು. ಆದರೆ ವ್ಯಾಪಾರ ಅರಸಿ ದೇಶಕ್ಕೆ ಬಂದವರು ತಮ್ಮ ಕೈಗಾರಿಕಾ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಹೆಚ್ಚಿಸಿ, ನಮ್ಮ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಕೆ ಬಹುತೇಕ ಕುಂಠಿತಗೊಳ್ಳುವಂತೆ ನೋಡಿಕೊಂಡರು ಎಂದರು.
ಇದರಿಂದ ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳು ಕೃಷಿಯತ್ತ ಸಾಗಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ ದಲ್ಲಿ ಗಾಂಧೀಜಿಯವರು ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಿ, ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದರಿಂದ ದೇಶೀಯ ಉತ್ಪನ್ನಗಳು ಮತ್ತೆ ಚಿಗುರುವಂತಾಯಿತು ಎಂದು ಬಾಯಲ್ ವಿವರಿಸಿದರು.
ಬೆಂಗಳೂರು ಟೆಕ್ಸಾಕ್ನ ಸಿಇಓ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20ನೇ ಅವಧಿಯ ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಸಣ್ಣ ಕೈಗಾರಿಕೆಗಳಿಗೆ ರ್ಯಾಂಪ್ ಯೋಜನೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ, ರಾಜ್ಯ ಸರಕಾರಗಳ ಜೊತೆಗೆ ವಿಶ್ವ ಬ್ಯಾಂಕ್ ಆರ್ಥಿಕ ಬಲ ನೀಡಿದವು ಎಂದರು.
ಯಾವುದೇ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿವೆ ಎಂದು ತಿಳಿಸಲು ಪ್ರಮಾಣಪತ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೂನ್ಯ ದೋಷ, ಶೂನ್ಯ ಪರಿಣಾಮದೊಂದಿಗೆ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಉತ್ಪಾದಿಸಲು ಝಡ್.ಇ.ಡಿ ಪ್ರಮಾಣಪತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಲ್ಲಿ ಕಂಚು, ಬೆಳ್ಳಿ, ಚಿನ್ನದಂತಹ ಪ್ರಮಾಣೀಕರಣ ಪತ್ರವನ್ನು ಪಡೆಯಬಹುದು. ಅದನ್ನು ಪಡೆಯುವ ಕುರಿತು ಕಾರ್ಯಾಗಾರದಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ಅಧ್ಯಕ್ಷತೆ ವಹಿಸಿದ್ದರು. ಎಂಎಸ್ಎಂಇನ ಗೋಪಿನಾಥ್ ಝೆಡ್ ಮತ್ತು ಲೀನ್ ಯೋಜನೆಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಝೆಡ್ಇಡಿ ಯೋಜನೆಯಡಿ ಅರ್ಹ ಉದ್ಯಮಿ ಗಳಿಗೆ ಸಿಲ್ವರ್ ಸರ್ಟಿಫಿಕೇಟ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಎಸ್ಎಂಇ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಸಂತ ಕಿಣಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಟೆಕ್ಸಾಕ್ ಅಸೋಸಿಯೇಟ್ ಕನ್ಸಲ್ಟೆಂಟ್ ಅರವಿಂದ್ ಡಿ ಬಾಳೇರಿ ಸ್ವಾಗತಿಸಿ, ಶ್ರುತಿ ಕಾರ್ಯಕ್ರಮ ನಿರೂಪಿಸಿ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.