ಪ್ರವಾದಿ ಮುಹಮ್ಮದರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯ : ಸೀರತ್ ಅಭಿಯಾನದ ಅಂಗವಾಗಿ ವಿಚಾರಗೋಷ್ಠಿಯಲ್ಲಿ ಕೊಟ್ಟೂರು ಶ್ರೀ
ಹೊಸಪೇಟೆ/ವಿಜಯನಗರ : ಪ್ರವಾದಿ ಮುಹಮ್ಮದ್ ಅವರು ಸಾರಿದ ಶಾಂತಿ, ಸಹೋದರತೆ, ಮಾನವೀಯತೆ, ಕರುಣೆ ಹಾಗೂ ಸೌಹಾರ್ದದ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ಹೊಸಪೇಟೆ ಸಂಸ್ಥಾನ ಮಠದ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಹೇಳಿದರು.
ಪ್ರವಾದಿ ಮುಹಮ್ಮದ್ ಅವರ ಜೀವನ, ಆದರ್ಶ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿರುವ ‘ಸೀರತ್ ಅಭಿಯಾನ ಅಂಗವಾಗಿ ಹೊಸಪೇಟೆ ನಗರ ಉದ್ಯಾನದಲ್ಲಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮ ಯಾವುದೇ ಇರಲಿ, ಮನುಷ್ಯನನ್ನು ಗೌರವಿಸುವುದು ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.
ಶ್ರೀ ನಿರಂಜನ ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಹಾಗೂ ಯೋಗೇಶ್ ಮಾಸ್ಟರ್ರ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮಹಮ್ಮದ್ (ಸ)’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜೀವನವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಮಾರ್ಗದರ್ಶಕವಾಗಿದೆ. ಅವರ ಹಿತವಚನಗಳನ್ನು ಜೀವನದಲ್ಲಿ ಪಾಲಿಸಿದರೆ ಸಮಾಜದಲ್ಲಿ ಶಾಂತಿ, ನ್ಯಾಯ ಹಾಗೂ ಸಹೋದರತ್ವ ಬಲಪಡಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ಸೇಕ್ರೆಡ್ ಹಾರ್ಟ್ ಚರ್ಚ್ನ ರೆವ.ಫಾ.ಭಗವಂತರಾಜ್, ವಿಜಯನಗರ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಎಚ್.ಎಂ.ಚಂದ್ರಶೇಖರ್ ಶಾಸ್ತ್ರಿ, ಎಚ್.ಎನ್.ಎಫ್. ಇಮಾಮ್ ನಿಯಾಜಿ, ಸೈಯ್ಯದ್ ನಾಜಿಮುದ್ದೀನ್, ಶಿಲ್ಪಾ ದ್ವಾರಕೇಶ್, ಮೌಲಾನಾ ಅನ್ವರ್ ಪಾಷ ಉಮ್ರಿ, ಯು. ಅಂಜನೇಯಲು, ಜಿ. ಖಾಜಾ ಹುಸೇನ್ ನಿಯಾಜಿ, ಸೈಯ್ಯದ್ ಮಹಮ್ಮದ್ ಕೆ. ಮುಹಮ್ಮದ್ ಅಜೀಜ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ಪಡೆದ ‘ವಾರ್ತಾಭಾರತಿ’ ಪತ್ರಿಕೆಯ ಜಿಲ್ಲಾ ವರದಿಗಾರ ಮಹಮ್ಮದ್ ಗೌಸ್ ಅವರನ್ನು ಸನ್ಮಾನಿಸಲಾಯಿತು.