ಸುರಪುರ | ಈದ್ ಮಿಲಾದ್ ಶಾಂತಿಯುತ ಆಚರಣೆಗೆ ಡಿವೈಎಸ್ಪಿ ಜಾವೇದ್ ಇನಾಂದಾರ್ ಕರೆ

Update: 2026-08-22 18:47 IST

ಸುರಪುರ: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ವಾತಾವರಣದಲ್ಲಿ ಆಚರಿಸಬೇಕು. ಯಾವುದೇ ಕೋಮುಗಲಭೆಗೆ ಅವಕಾಶ ನೀಡಬಾರದು ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಜಾವೇದ್ ಇನಾಂದಾರ್ ಕರೆ ನೀಡಿದರು.

ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ನಾನು ಕಳೆದ ನಾಲ್ಕು ವರ್ಷಗಳಿಂದ ಸುರಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಜನರು ಸಾಮರಸ್ಯದಿಂದ ಬದುಕುತ್ತಿರುವುದನ್ನು ನೋಡಿದ್ದೇನೆ. ಮುಂದೆಯೂ ಇದೇ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ನಾವು ಯಾವುದೇ ಧರ್ಮದವರಾಗಿದ್ದರೂ ಮೊದಲು ಭಾರತೀಯರು ಎಂಬ ಹೆಮ್ಮೆ ಹೊಂದಿರಬೇಕು,” ಎಂದು ಹೇಳಿದರು.

ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾರಾದರೂ ತೊಂದರೆ ನೀಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು ಹಾಗೂ ಕಬೀರದಾಸರ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕೋಮುಗಲಭೆ ಪ್ರಚೋದಿಸುವ ಅಥವಾ ಶಾಂತಿ ಭಂಗಕ್ಕೆ ಯತ್ನಿಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್ಚರಿಕೆ ನೀಡಿದರು.

ಸುರಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಉಮೇಶ ಎಂ. ನಾಯಕ ಮಾತನಾಡಿ, ಸುರಪುರದಲ್ಲಿ ಹಿಂದಿನಿಂದಲೂ ಎಲ್ಲ ಧರ್ಮಗಳ ಹಬ್ಬಗಳನ್ನು ಪರಸ್ಪರ ಸಹಕಾರದಿಂದ ಆಚರಿಸುವ ಸಂಪ್ರದಾಯವಿದೆ. ಈದ್ ಮಿಲಾದ್ ಹಬ್ಬವನ್ನೂ ಅದೇ ರೀತಿಯಲ್ಲಿ ಶಾಂತಿಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮಾತನಾಡಿ, ಸುರಪುರದಲ್ಲಿ ಹಿಂದೂ-ಮುಸ್ಲಿಂ ಭೇದಭಾವಕ್ಕೆ ಅವಕಾಶವಿಲ್ಲ. ಎಲ್ಲರೂ ಸಹೋದರ ಭಾವದಿಂದ ಬದುಕುತ್ತಿದ್ದು, ಕಿಡಿಗೇಡಿಗಳ ಕೃತ್ಯಗಳಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಂತಿ ಸಭೆಯಲ್ಲಿ ವೆಂಕಟೇಶ ಬೇಟೆಗಾರ, ಚಂದ್ರಶೇಖರ ಹಸನಾಪುರ, ಉಸ್ತಾದ್ ವಜಾಹತ್ ಹುಸೇನ್, ದಾವೂದ್ ಪಠಾಣ್, ನಿಂಗಣ್ಣ ಬುಡ್ಡಾ, ಅಬ್ದುಲ್ ಗಫರ್ ನಗನೂರಿ, ಮಹಿಬೂಬ ಒಂಟಿ, ನಿಜ್ಜು ಉಸ್ತಾದ್, ಖಾಲಿದ್ ಅಹ್ಮದ್ ತಿಳಿಕೋಟೆ, ನಾಸೀರ್ ಕುಂಡಾಲೆ, ಕಮ್ರುದ್ದೀನ್ ನಾರಾಯಣಪೇಟ, ಭೀಮು ನಾಯಕ ಮಲ್ಲಿಬಾವಿ, ಶಿವಲಿಂಗ ಹಸನಾಪುರ, ಅಬೀದ್ ಹುಸೇನ್ ಪಗಡಿ, ಮಹ್ಮದ್ ಗೌಸ್ ಕಿಣ್ಣಿ, ಮಲ್ಲು ಬಿಲ್ಲವ್, ಖಾಜಾ ಖಲೀಲ್ ಅಹ್ಮದ್ ಅರಕೇರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News