ಯಾದಗಿರಿ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಖಂಡಿಸಿ ಪ್ರತಿಭಟನೆ

Update: 2026-08-20 19:33 IST

ಸುರಪುರ: ದಲಿತರಿಗೆ ಅವಮಾನ, ಜಾತಿ ನಿಂದನೆ ಘಟನೆಗಳು ಪದೇ ಪದೇ ನಡಿಯುತ್ತಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಅಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಮಾಳಪ್ಪ ಕಿರದಳ್ಳಿ, ಉತ್ತರಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಹೋಮ ಹವನ ಮಾಡುವ ಮೂಲಕ ದೇಶದಲ್ಲಿ ಇನ್ನೂ ಅಸ್ಪೃಶ್ಯತೆಯನ್ನು ಜೀವಂತ ಇಡುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಇದು ಕೇವಲ ಒಂದು ಘಟನೆಯಲ್ಲ ನಮ್ಮ ಜಿಲ್ಲೆಯಲ್ಲೂ ಕೂಡ ಅನೇಕ ಕಡೆಗಳಲ್ಲಿ ದಲಿತರಿಗೆ ಅವಮಾನಿಸುವ ಹಲ್ಲೆ ಮಾಡುವ ಜಾತಿ ನಿಂದನೆ ಮಾಡುವ ಘಟನೆಗಳು ಪದೇ ಪದೇ ನಡಿಯುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಬೀಳದಿದ್ದರೆ ನಮ್ಮ ಸಂಘಟನೆ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ರಾಜ್ಯ ಸಮಿತಿಯ ಸದಸ್ಯ ನಾಗಣ್ಣ ಬಡಿಗೇರ ಇತರರು ಮಾತನಾಡಿದರು. ಇದಕ್ಕೂ ಮುನ್ನ ಮುಖ್ಯ ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಮರುಳಸಿದ್ದಪ್ಪ ನಾಯ್ಕಲ್, ಸುನಂದ ಮದ್ರಿಕಿ, ಬಸವರಾಜ ಅಣಬಿ , ಅಶೋಕ ನಾಯ್ಕಲ್, ಪರಶುರಾಮ ಮಹಲ್ ರೋಜಾ, ನರೇಂದ್ರ ಅನವಾರ,ನಿಂಗಣ್ಣ ಬಿರನಾಳ, ಭೀಮರಾಯ ಅಗ್ನಿ, ಚಂದ್ರಕಾಂತ ಬಜೇರಿ,ಶರಣಪ್ಪ ತಳವಾರಗೇರ, ಗುರುನಾಥ್ ನಾಟೇಕರ್, ಆಂಜನೇಯ ಬಳಿಚಕ್ರ, ಭೀಮರಾಯ ದಂತಾಪೂರ,ರಾಯಪ್ಪ ಯತ್ನಾಳ,ತಿಪ್ಪಣ್ಣ ಅಗ್ನಿ,ತಿರುಪತಿ ಕೊಡೇಕಲ್,ಸಿದ್ರಾಮಪ್ಪ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News