ಯಾದಗಿರಿ: ಯರಗೋಳ, ಹೋರುಂಚಾದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕಂದಕೂರ ಚಾಲನೆ
ಯಾದಗಿರಿ: ರಾಜ್ಯದಲ್ಲಿ ಅಧಿಕಾರ ನಡೆಸಿದ ಮೂರು ಜನ ಮುಖ್ಯಮಂತ್ರಿಗಳು ತಮ್ಮ ಜನಪರ ಆಡಳಿತದಿಂದ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಗುರಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ತಿಳಿಸಿದರು.
ಸೋಮವಾರ ಮತಕ್ಷೇತ್ರದ ಹೋರುಂಚಾ ಹಾಗೂ ಯರಗೋಳ ಗ್ರಾಮದಲ್ಲಿ ಕೆಕೆಆರ್ ಡಿಬಿಯ ಮೈಕ್ರೋ ಎಸ್.ಸಿಪಿ ಯೋಜನೆಯಡಿ ಥಾವರು ನಾಯಕ ತಾಂಡಾದಿಂದ ತಾನು ನಾಯಕ ತಾಂಡಾವರೆಗೆ ಮುಖ್ಯರಸ್ತೆ 4 ಕೋಟಿ ರೂ.ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಹೋರುಂಚಾ ಗ್ರಾಮದಲ್ಲಿ ನಡುವಿನ ತಾಂಡಾದಿಂದ ಯಡ್ಡಳ್ಳಿ ಗ್ರಾಮದ ಹರಿಜನವಾಡಾದ ವರೆಗೆ 3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲಮನ್ನಾ, ಜನತಾ ದರ್ಶನ, ಗ್ರಾಮ ವಾಸ್ತವ್ಯ ಹಾಗೂ ಸುವರ್ಣ ಗ್ರಾಮದಂಥ ಮಹತ್ವದ ಯೋಜನೆ ಜಾರಿಗೊಳಿಸುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು, ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿಗಳಿಗೆ ಸೈಕಲ ವಿತರಣೆ ಯೋಜನೆ ತಂದು ಅನುಕೂಲ ಮಾಡಿಕೊಟ್ಟರು. ಸಿದ್ದರಾಮಯ್ಯನವರು ಅನೇಕ ಭಾಗ್ಯಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರದ ನೂತನ ಆಡಳಿತದ ಚುಕ್ಕಾಣಿ ಹಿಡಿಯಲಿರುವರು ಈ ಮೂರು ನಾಯಕರ ಕಾರ್ಯಕ್ರಗಳನ್ನು ಆದರ್ಶವಾಗಿ ಇಟ್ಟುಕೊಂಡು ಆಡಳಿತ ನಡೆಸಬೇಕು ಎಂದರು.
ಮುಂದಿನ ಮುಖ್ಯಮಂತ್ರಿಗಳು ಸೆಟಲ್ ಮೆಂಟ್ ಪಾಲಿಟಿಕ್ಸ್ ಮಾಡದೆ ಡೆವಲಪಮೆಂಟ್ ಪಾಲಿಟಿಕ್ಸ್ ಮಾಡುವ ಮೂಲಕ ಜನತೆಗೆ ಉತ್ತಮ ಆಡಳಿತ ನೀಡಲಿ ಎಂದು ಶಾಸಕ ಶರಣಗೌಡ ಕಂದಕೂರ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ ಅವರಿಗೆ ಶುಭ ಹಾರೈಸಿದರು.
ಉತ್ತರಾಧಿಮಠದ ಪಂ.ಸತ್ಯಬೋಧಾಚಾರ್ಯ ಘಟಾಲಿ ಮಾತನಾಡಿ, ಕ್ಷೇತ್ರದಲ್ಲಿನಾವು ಎಷ್ಟೋ ನಾಯಕರನ್ನು ಕಂಡಿದ್ದೇವೆ. ಆದರೆ, ಅಭಿವೃದ್ಧಿ ಪರ ಇರುವ ಶಾಸಕ ಶರಣಗೌಡ ಕಂದಕೂರ ಅವರಂಥ ನಾಯಕತ್ವ ಸಿಗುವುದು ಬಹಳ ಅಪರೂಪ. ಥಾವರು ನಾಯಕ ತಾಂಡಾ ರಸ್ತೆ ಸುಧಾರಣೆಯಿಂದ ಈ ಭಾಗದ ಜನತೆ ಸಂಚಾರಕ್ಕೆ ಪಡುತ್ತಿರುವ ಕಷ್ಟ ದೂರವಾಗಲಿದೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಪರಶುರಾಮ, ತಾಪಂ ಎಡಿ ರಾಮಚಂದ್ರ, ಕಂದಾಯ ನಿರೀಕ್ಷಕ ರಾಜಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಭೋಜನಗೌಡ ಯಡ್ಡಳ್ಳಿ, ರವಿ ಪಾಟೀಲ್ ಬಸ್ಸಣ್ಣ ದೇವರಳ್ಳಿ, ಶಂಕ್ರಪ್ಪ ದಿಬ್ಬಾ, ಶಿವಣ್ಣ ಹಿರಿಕೇರಾ, ಶಿವು ಭೀಮನಳ್ಳಿ, ಮಾರ್ಥಂಡ ಯರಗೋಳ, ಸಿದ್ದಪ್ಪ ಹೋರುಂಚಾ, ಮಜಾಯಿದ್ ಸೇಠ್, ಮಲ್ಲನಗೌಡ ಹೋರುಂಚಾ, ರಾಜುಗೌಡ ಚಾಮನಳ್ಳಿ,ಗುರು ಅಲ್ಲಿಪುರ ತಾಂಡಾ, ಸಾಬಣ್ಣಾ ಹೋರುಂಚಾ, ಹಂಪಯ್ಯಾ ಅಲ್ಲಿಪುರ, ದೇವಪ್ಪ ವಡ್ನಳ್ಳಿ, ಸಿದ್ದಲಿಂಗರಡ್ಡಿ ಅರಿಕೇರಾ, ರಾಘವೇಂದ್ರ ವಡ್ನಳ್ಲಿ, ನಾಗರಾಜ ಮಲಕಪನಳ್ಳಿ, ಮರೆಪ್ಪ ಚಡಬನೂರ, ಗುತ್ತಿಗೆದಾರ ಸಿದ್ದಪ್ಪಗೌಡ ಕಾಳೆಬೆಳಗುಂದಿ ಇದ್ದರು.